ADVERTISEMENT

ಕೋಲಾರ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 5:41 IST
Last Updated 10 ಮಾರ್ಚ್ 2023, 5:41 IST
ಮಾಲೂರು ಪಟ್ಟಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೆ.ಎಸ್‌. ಮಂಜುನಾಥ್‌ ಗೌಡ ಹಾಗೂ ಹೂಡಿ ವಿಜಯಕುಮಾರ್‌ ಬೆಂಬಲಿಗರು ಕಿತ್ತಾಡಿಕೊಂಡರು
ಮಾಲೂರು ಪಟ್ಟಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೆ.ಎಸ್‌. ಮಂಜುನಾಥ್‌ ಗೌಡ ಹಾಗೂ ಹೂಡಿ ವಿಜಯಕುಮಾರ್‌ ಬೆಂಬಲಿಗರು ಕಿತ್ತಾಡಿಕೊಂಡರು   

ಮಾಲೂರು (ಕೋಲಾರ ಜಿಲ್ಲೆ): ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೆ.ಎಸ್‌. ಮಂಜುನಾಥ್‌ ಗೌಡ ಹಾಗೂ ಹೂಡಿ ವಿಜಯಕುಮಾರ್‌ ಬೆಂಬಲಿಗರ ನಡುವೆ ಗುರುವಾರ ಕಿತ್ತಾಟ ನಡೆದಿದೆ.

ಮಾರ್ಚ್‌ 12ರಂದು ಇಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆ ನಡೆಸಲು ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯು ಗಲಾಟೆ, ಗದ್ದಲ ಗೂಡಾಯಿತು.

‌ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಭಾಷಣ
ಆರಂಭಿಸುತ್ತಿದ್ದಂತೆ ಹೂಡಿ ವಿಜಯಕುಮಾರ್‌ ಬೆಂಬಲಿಗ ಕೂರಿ ಮಂಜು ಎಂಬುವರು ಗಲಾಟೆ ಆರಂಭಿಸಿದರು. ಇದಕ್ಕೆ ಮಾಜಿ ಶಾಸಕ ಕೆ.ಎಸ್‌. ಮಂಜುನಾಥ್ ಗೌಡ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಿತ್ತಾಟ ನಡೆಯಿತು. ಪುರಸಭೆ ಸದಸ್ಯ ಭಾನುತೇಜ ಮತ್ತು ಕೆವಿಎಸ್ ಮಂಜು ಕೈಕೈ ಮಿಲಾಯಿಸಿದರು.

ADVERTISEMENT

ಈ ವೇಳೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಭೆ ಮುಂದುವರಿಸಲು ಅನುವು ಮಾಡಿಕೊಟ್ಟರು.

‘ಗುಂಪುಗಾರಿಕೆ ಬಿಟ್ಟು ಪಕ್ಷ ಸಂಘಟಿಸಲು ಒತ್ತು ಕೊಡಬೇಕು. ಎಷ್ಟೇ ಪ್ರಭಾವಶಾಲಿಗಳಾದರೂ ಸರಿ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ದಿಟ್ಟಕ್ರಮ ತೆಗೆದುಕೊಳ್ಳಲಾಗುವುದು’ ಎಂದು ವೇಣುಗೋಪಾಲ್‌ ಎಚ್ಚರಿಕೆ ನೀಡಿದರು.

ಕ್ಷೇತ್ರದ ಟಿಕೆಟ್‌ಗಾಗಿ ಮಂಜುನಾಥ್‌ ಗೌಡ ಹಾಗೂ ಹೂಡಿ ವಿಜಯಕುಮಾರ್‌ ಕಸರತ್ತು ನಡೆಸುತ್ತಿದ್ದು, ಬಹಳ ದಿನಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇಬ್ಬರೂ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ಜೆಡಿಎಸ್‌ನಿಂದ ಶಾಸಕರಾಗಿದ್ದ ಮಂಜುನಾಥ್‌ ಗೌಡ ಕಳೆದ ವರ್ಷ ಬಿಜೆಪಿ ಸೇರಿದ್ದರು.

ಕಾರ್ಯಕ್ರಮದಲ್ಲಿದ್ದ ಮಂಜುನಾಥ್ ಗೌಡ, ಹೂಡಿ ವಿಜಯಕುಮಾರ್‌ ಗಲಾಟೆ ಸಂಬಂಧ ಪ್ರತಿಕ್ರಿಯೆ
ನೀಡಿಲ್ಲ. ದೂರವಾಣಿ ಕರೆಯನ್ನೂ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.