ADVERTISEMENT

ಪ್ರಾಣಕ್ಕೆ ಹಾನಿಯಾದರೆ ರಮೇಶ್‌ ಕುಮಾರ್‌ ಕಾರಣ: ಬ್ಯಾಲಹಳ್ಳಿ ಗೋವಿಂದಗೌಡ ಆರೋಪ

‘ಮೇದಾವಿ ರಾಜಕಾರಣಿಯಿಂದ ಲೋಕಾಯುಕ್ತ ದುರ್ಬಳಕೆ‘

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:09 IST
Last Updated 28 ಮೇ 2025, 16:09 IST
ಕೋಲಾರದಲ್ಲಿ ಬುಧವಾರ ಮತದಾನ ಕೇಂದ್ರದ ಬಳಿ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ಧ ಘೋಷಣೆ ಕೂಗುತ್ತಾ ಮುಗಿಬಿದ್ದ ಕಾಂಗ್ರೆಸ್‌ನ ಒಂದು ಗುಂಪಿನ ಕಾರ್ಯಕರ್ತರನ್ನು ಪೊಲೀಸರು ತಡೆದರು
ಕೋಲಾರದಲ್ಲಿ ಬುಧವಾರ ಮತದಾನ ಕೇಂದ್ರದ ಬಳಿ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ಧ ಘೋಷಣೆ ಕೂಗುತ್ತಾ ಮುಗಿಬಿದ್ದ ಕಾಂಗ್ರೆಸ್‌ನ ಒಂದು ಗುಂಪಿನ ಕಾರ್ಯಕರ್ತರನ್ನು ಪೊಲೀಸರು ತಡೆದರು   

ಕೋಲಾರ: ‘ಮೇದಾವಿ ರಾಜಕಾರಣಿ, ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಕುಟುಂಬವನ್ನು ಗುರಿ ಮಾಡಿದ್ದು, ನನ್ನ ಪ್ರಾಣಕ್ಕೆ ಕಿಂಚಿತ್ತು ಹಾನಿಯಾದರೂ ಅವರೇ ನೇರ ಹೊಣೆ’ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ನನ್ನ ಪ್ರಾಣ ತೆಗೆಯುವ ಮಟ್ಟಕ್ಕೆ ಇಳಿಯಲು ಮುಂದಾಗಿರುವುದು ದುರಂತ. ಸ್ವಾತಿ ಹೋಟೆಲ್ ಸಮೀಪ ನನ್ನ ವಿರುದ್ಧ ಧಿಕ್ಕಾರ ಕೂಗಲು ಅವರ ಬೆಂಬಲಿಗರಿಗೆ ನೇರವಾಗಿ ಸೂಚಿಸುತ್ತಾರೆ. ದ್ವೇಷ ರಾಜಕಾರಣ ಖಂಡನೀಯ’ ಎಂದರು.

‘ನಾನೆಂದೂ ರಮೇಶ್‌ ಕುಮಾರ್‌ ಕುರಿತು ಕೆಟ್ಟದಾಗಿ ಮಾತನಾಡಿಲ್ಲ. ಆದರೆ, ಅವರು ನನ್ನ ತಾಯಿಯ ಕುರಿತು ಮಾತನಾಡಿದ್ದಾರೆ. ಅವರ ತಾಯಿ, ನನ್ನ ತಾಯಿ ಒಂದೇ ಎಂದು ಭಾವಿಸಿದ್ದೇನೆ’ ಎಂದು ನುಡಿದರು.

ADVERTISEMENT

‘ಲೋಕಾಯುಕ್ತ ದಾಳಿಗೆ ನನ್ನ ವಿರೋಧವಿಲ್ಲ. ಆದರೆ, ಶೋಧಕ್ಕೆಂದು ನನ್ನ ಮನೆಗೆ ಬಂದಿದ್ದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗೆ ಹಿರಿಯ ರಾಜಕಾರಣಿ ರಮೇಶ್‍ ಕುಮಾರ್ 10 ರಿಂದ 12 ಬಾರಿ ಫೋನ್ ಮಾಡಿ ಏನು ಸಿಕ್ಕಿತು ಎಂದು ಕೇಳಿದ್ದಾರೆ. ಕೋಲಾರದ ಆರ್‌ಎಂ ಗೋಲ್ಡನ್ ಸಿಟಿ ಮನೆಯಲ್ಲಿ ಪರಿಶೀಲಿಸಿ ಎಂದು ನಿರ್ದೇಶನ ನೀಡಿದ್ದಾರೆ. ಲೋಕಾಯುಕ್ತ ಜೊತೆ ಇವರಿಗೆ ಏನು ಕೆಲಸ? ಅವರಿಂದ ಇದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದು ಕಿಡಿಕಾರಿದರು.

‘ರಮೇಶ್‌ ಕುಮಾರ್‌ ಅವರ ಚುನಾವಣೆಯಲ್ಲಿ 10 ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಊರೂರಿನಲ್ಲಿ ಸಭೆ ನಡೆಯಲು ಪೆಂಡಾಲ್, ಊಟದ ವ್ಯವಸ್ಥೆ ಮಾಡಿದ್ದೇನೆ’ ಎಂದರು.

‘ನನ್ನ ಮೇಲೆ ರಮೇಶ್‌ ಕುಮಾರ್‌ ತಮ್ಮ ಬೆಂಬಲಿಗರಿಂದ ಹಲ್ಲೆ ಮಾಡಿಸುವ ಸುದ್ದಿ ಹಿನ್ನೆಲೆಯಲ್ಲಿ ನನ್ನ ರಕ್ಷಣೆಗೆ ಬಂದಿರುವುದಾಗಿ ಪೊಲೀಸರೇ ಹೇಳುತ್ತಾರೆ ಎಂದರೆ ಅದರ ಅರ್ಥವೇನು? ನಾನು ರಮೇಶ್‌ ಕುಮಾರ್‌ ಅವರನ್ನು ತಂದೆ ಎಂದು ಭಾವಿಸಿ ಸೇವೆ ಮಾಡಿದ್ದೇನೆ. ಅದ್ಯಾವುದಕ್ಕೂ ಕೃತಜ್ಞತೆ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ನಂಜೇಗೌಡ, ಕೊತ್ತೂರು ಮಂಜುನಾಥ್ ಕುರಿತು ಮಾತನಾಡುತ್ತಿಲ್ಲ. ಅವರಿಗೆ ನಾನು ಮತದಾರನೂ ಅಲ್ಲ’ ಎಂದರು.

ಅಧ್ಯಕ್ಷ ಸ್ಥಾನದ ಕುರಿತ ಕೇಳಿದ ಪ್ರಶ್ನೆಗೆ, ‘ಯಾರೇ ಅಧ್ಯಕ್ಷರಾಗಲಿ ಅದು ಮುಖ್ಯವಲ್ಲ. ಬ್ಯಾಂಕ್‍ ಉಳಿಯಬೇಕು. ತಾಯಂದಿರು, ಬಡವರಿಗೆ ನೆರವು ಸಿಗಬೇಕು’ ಎಂದು ಪ್ರತಿಕ್ರಿಯಿಸಿದರು.

ಮಾಜಿ ಸಚಿವ ರಮೇಶ್‌ ಕುಮಾರ್‌ ಜತೆ ಇದ್ದಾಗ ನಾನು ಸತ್ಯ ಹರಿಶ್ಚಂದ್ರ; ಅವರು ವಿಧಾನಸಭೆಯಲ್ಲಿ ಸೋತಾಗ ನಾನು ಭ್ರಷ್ಟನೇ? ಯಾವ ಹಣ ಖರ್ಚು ಮಾಡಿದ್ದಾನೆಂದು ಆಗ ಏಕೆ ಕೇಳಲಿಲ್ಲ?
– ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.