ADVERTISEMENT

ಕೋಲಾರ: ಸರ್ಕಾರಿ ಭೂಮಿ ವಾಪಸ್‌ಗೆ ಆಗ್ರಹ

ಶಾಸಕರಿಂದ ಬ್ರೋಕರ್‌ ಕೆಲಸ: ಸಾಮಾಜಿಕ ಕಾರ್ಯಕರ್ತ ಆರೋಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:42 IST
Last Updated 20 ಆಗಸ್ಟ್ 2025, 5:42 IST
ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು
ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು   

ಕೋಲಾರ: ‘ಬಂಗಾರಪೇಟೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಕಾನ್ಫಿಡೆಂಟ್‌ ಸಂಸ್ಥೆ ಬಳಿ ಇರುವ ಗೋಮಾಳ ಜಮೀನನ್ನು ಸರ್ಕಾರ ಕೂಡಲೇ ತನ್ನ ಸುಪರ್ದಿಗೆ ಪಡೆಯಬೇಕು. ಯಾವುದೇ ಕಾರಣಕ್ಕೂ ಆ ಸಂಸ್ಥೆಗೆ ನೀಡಬಾರದು’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಜಮೀನನ್ನು ಕಾನ್ಫಿಡೆಂಟ್ ಸಂಸ್ಥೆಗೆ ಕೊಡುವಂತೆ ವಿಧಾನಸಭೆಯಲ್ಲಿ ಒತ್ತಾಯಿಸುವ ಮೂಲಕ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಿಯಲ್‌ ಎಸ್ಟೇಟ್‌ ಬ್ರೋಕರ್ ಪಾತ್ರ ವಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶಾಸಕರು ಕಾರ್ಪೊರೇಟ್‌ ಸಂಸ್ಥೆ ಪರವಾಗಿ ನಿಂತು ಆ ಸಂಸ್ಥೆಗೆ ಜಮೀನು ನೀಡುವಂತೆ ಒತ್ತಾಯಿಸುತ್ತಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಸದನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆದಾಯದ ಸಂಸ್ಥೆ ಪರ ‌ಏಕೆ‌ ಮಾತನಾಡಬೇಕು? ಅವರು ಸಂಸ್ಥೆಯ ನಿರ್ದೇಶಕರೂ ಆಗಿದ್ದವರು. ಈಗ ಅದೇ ಸಂಸ್ಥೆಗೆ ಜಮೀನು ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿರುವುದರಿಂದ ಹಿಂದೆ ಪಿತೂರಿ ಇದೆ’ ಎಂದು ದೂರಿದರು.

ADVERTISEMENT

‘ಇದು ಗೋಮಾಳ, ಖರಾಬ್‌ ಗುಡ್ಡೆ ಜಮೀನು ಆಗಿದ್ದು ಒತ್ತುವರಿ ಆಗಿದೆ. ಹಿಂದೆ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ 51 ಎಕರೆ ಜಮೀನನ್ನು ಸರ್ಕಾರಕ್ಕೆ ಉಳಿಸಿದ್ದೇವೆ. ಪಹಣಿಯಲ್ಲಿ ಜಮೀನು ಸರ್ಕಾರದ ಹೆಸರಲ್ಲಿಯೇ ಉಳಿದಿದೆ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಡಿ.ಕೆ.ರವಿ, ಅಕ್ರಂ ಪಾಷಾ ಕೂಡ ಅಕ್ರಮ ಪತ್ತೆ ಹಚ್ಚಿದ್ದರು. ಈಗ ಆ ಜಮೀನನ್ನು ಕಡಿಮೆ ಬೆಲೆಗೆ ಪಡೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಆದರೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಯಾವುದೇ ಒಪ್ಪಿಗೆ ಸೂಚಿಸಿಲ್ಲ’ ಎಂದರು.

‘ಸರ್ಕಾರದ ವಿರುದ್ಧ ಬ್ಲ್ಯಾಕ್‌ಮೇಲ್ ರಾಜಕೀಯ ನಡೆಯುತ್ತಿದೆ. ವಿಧಾನಸಭೆಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಬೇಕಾದ ಅವರು ಕಾರ್ಪೊರೇಟ್ ಸಂಸ್ಥೆಯ ಪರವಾಗಿ ಒತ್ತಡ ಹೇರುವುದು ಶೋಭೆ ತರುವುದಿಲ್ಲ’ ಎಂದು ಹೇಳಿದರು.

‘ಬಂಗಾರಪೇಟೆ ತಾಲ್ಲೂಕಿನ ಚಿಕ್ಕಅಂಕಡಹಳ್ಳಿ ಮತ್ತು ಸೂಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸುಮಾರು 51 ಎಕರೆ ಜಮೀನು ಮೂಲ ಪಹಣಿಯಲ್ಲಿ ಸರ್ಕಾರಿ ಗೋಮಾಳವೆಂದು ದಾಖಲಿಸಲಾಗಿದೆ. ಆದರೆ, ಈ ಭೂಮಿಯ ಸ್ವರೂಪವನ್ನು ಸಂಪೂರ್ಣವಾಗಿ ಹಾಳುಗೆಡವಿ ಖಾಸಗಿ ಸ್ವಾರ್ಥಕ್ಕಾಗಿ ಬಳಸಲು ಯತ್ನಿಸಲಾಗಿದೆ. ಗುಂಡು ತೋಪು, ಜೀವ ಸೆಲೆ ಮುಚ್ಚಲಾಗಿದೆ’ ಎಂದರು.

‘2000ರಿಂದಲೇ ಈ ಸರ್ಕಾರಿ ಜಮೀನಿನ ಮೇಲೆ ನಕಲಿ ದಾಖಲೆ ಸೃಷ್ಟಿಸಿ, ಖಾಸಗಿಯವರ ಹೆಸರಿಗೆ ಖಾತೆ ಮಾಡಿ ನಂತರ ಕಾರ್ಪೊರೇಟ್‌ ಸಂಸ್ಥೆ ಮಾರಾಟ ಮಾಡಿದ್ದಾರೆ’ ಎಂದು ದೂರಿದರು.

‘ಈ ಜಮೀನನ್ನು ಪ್ರಸ್ತುತ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿದರೆ ಸರ್ಕಾರಕ್ಕೆ ಕನಿಷ್ಠ ₹ 100 ಕೋಟಿಗೂ ಅಧಿಕ ಆದಾಯ ಬರಬಹುದು’ ಎಂದು ಹೇಳಿದರು.

‘ಆ ಸಂಸ್ಥೆಯಿಂದ ಸ್ಥಳೀಯ ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದೆ ಎಂಬ ಶಾಸಕರ ವಾದದಲ್ಲಿ ಅರ್ಥವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.