ADVERTISEMENT

ಕೋಲಾರ | ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

ವೆರ್ಗಾ ಕಂಪನಿ ಮುಚ್ಚದಂತೆ ಸಿಪಿಎಂ ಆಗ್ರಹ l ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:00 IST
Last Updated 3 ಸೆಪ್ಟೆಂಬರ್ 2025, 6:00 IST
<div class="paragraphs"><p>ಕೋಲಾರದ ತಹಶೀಲ್ದಾರ್‌ ಕಚೇರಿ ಮುಂದೆ ಮಂಗಳವಾರ ಸಿಪಿಎಂ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು</p></div>

ಕೋಲಾರದ ತಹಶೀಲ್ದಾರ್‌ ಕಚೇರಿ ಮುಂದೆ ಮಂಗಳವಾರ ಸಿಪಿಎಂ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

   

ಕೋಲಾರ: ‘ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆರ್ಗಾ ಅಟ್ಯಾಚ್‌ಮೆಂಟ್ ಕಂಪನಿಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ನಷ್ಟ ಎಂದು ತೋರಿಸಿ ಅಕ್ರಮವಾಗಿ ಮುಚ್ಚಿದೆ. ಈ ಕೈಗಾರಿಕೆಯನ್ನು ಮತ್ತೆ ಆರಂಭಿಸಬೇಕು’ ಎಂದು ಒತ್ತಾಯಿಸಿ ಸಿಪಿಎಂನಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮಾತನಾಡಿ, ‘ಸುಮಾರು 2006 ರಲ್ಲಿ ಒಂದು ಸಣ್ಣ ಶೆಡ್‌ನಲ್ಲಿ ಆರಂಭವಾದ ವೆರ್ಗಾ ಕಂಪನಿಯು 2019 ರಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದೇಶಕ್ಕೆ ರಪ್ತು ಮಾಡಿದ ಲಾಭದಾಯಕ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ’ ಎಂದರು.

ADVERTISEMENT

ಈ ಕೈಗಾರಿಕೆಯು ಬುಲ್ಡೋಜರ್‌ ಬಕೆಟ್ಸ್‌ಗೆ ಬೇಕಾಗುವ ಎಕ್ಸ್ ಕವೇಟರ್ ಬಕೆಟ್ಸ್, ರಿಫ್ ಮತ್ತು ಕಪ್ಲರ್ಸ್ 200 ರಿಂದ 1800 ವಿವಿಧ ಸಾಮಗ್ರಿಗಳನ್ನು ತಯಾರಿ ಮಾಡಿ, ಸುಮಾರು 58 ದೇಶಗಳಿಗೆ ರಪ್ತು ಮಾಡುತ್ತಿದೆ. ಲಾಭದಾಯಕವಾಗಿ ನಡೆಯುತ್ತಿರುವ ಕೈಗಾರಿಕೆಯಾಗಿದೆ. ಈ ಕೈಗಾರಿಕೆಯಿಂದ ಬಂದ ಲಾಭದಿಂದ 2018-19 ರಲ್ಲಿ ವೆರ್ಗಾ 2, ವೆರ್ಗಾ 3 ನೇ ಘಟಕಗಳನ್ನು ಮಾಲೂರು ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ ಆರಂಭಿಸಲಾಗಿದೆ. 2023 ರಲ್ಲಿ ವೆರ್ಗಾ 2 ಮತ್ತು ವೆರ್ಗಾ 3 ಘಟಕದ ಹೆಸರನ್ನು ವೀರ್ಯ 1 ಮತ್ತು ವೀರ್ಯ 2 ಎಂದು ಬದಲಾವಣೆ ಮಾಡಲಾಗಿದೆ. ವೆರ್ಗಾ 1 ಘಟಕದಲ್ಲಿ 2019 ರಲ್ಲಿ ದುಡಿಯುತ್ತಿದ್ದ 182 ಕಾರ್ಮಿಕರಿಗೆ ಹಲವು ಆಸೆ ಆಮಿ ನೀಡಿ ಹಂತ ಹಂತವಾಗಿ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ವೆರ್ಗಾ ಕಂಪನಿಯಲ್ಲಿ ಪ್ರಸ್ತುತ ದುಡಿಯುತ್ತಿರುವ 81 ಕಾಯಂ ಕಾರ್ಮಿಕರನ್ನು ಮನೆಗೆ ಕಳುಹಿಸಿ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ವೇತನವನ್ನು ನೀಡಿ ಕೆಲಸ ಮಾಡಿಸಿಕೊಳ್ಳುವ ದುರುದ್ದೇಶದಿಂದ ಲಾಭದಾಯಕ ವಾಗಿರುವ ಕೈಗಾರಿಕೆಯನ್ನು ನಷ್ಟ ಎಂದು ತೋರಿಸಲಾಗುತ್ತಿದೆ ಎಂದು
ದೂರಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ವಿಜಯಕೃಷ್ಣ ಮಾತನಾಡಿ, ‘ಆಡಳಿತ ಮಂಡಳಿಯು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗದೇ ಇರುವುದು ಸರಿಯಲ್ಲ. 10 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ
ವನ್ನು ಅಲ್ಲಿನ ಕಾರ್ಮಿಕರು ನಡೆಸುತ್ತಿದ್ದರೂ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆಸದೇ ಇರುವುದು ಸರಿಯಲ್ಲ. ತಕ್ಷಣ ಮಧ್ಯ ಪ್ರವೇಶ ಮಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು’ ಎಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಒತ್ತಾಯಿಸಿದರು,

ಪ್ರತಿಭಟನೆಯ ನೇತೃತ್ವವನ್ನು ಸಿಪಿಎಂ ತಾಲ್ಲೂಕು ಮುಖಂಡರಾದ ಎಂ.ಭೀಮರಾಜ್, ಎನ್.ಎನ್.ಶ್ರೀರಾಮ್, ಎಸ್.ಆಶಾ, ವಿ.ನಾರಾಯಣರೆಡ್ಡಿ, ಗಂಗಟ್ಟ ಯಲ್ಲಪ್ಪ, ಕೆ.ವಿ.ಮಂಜುನಾಥ್, ಚಿನ್ನಮ್ಮ, ಡಿ.ಎಸ್.ವೆಂಕಟರವಣ
ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.