
ಕೋಲಾರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿನ ಉಡುಪಿ ಶ್ರೀಕೃಷ್ಣ ಬೃಂದಾವನ ಹೋಟೆಲ್ ಮೇಲೆ ನಗರಸಭೆ, ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಅನೈರ್ಮಲ್ಯ ಹಾಗೂ ಅವ್ಯವಸ್ಥೆ ಕಂಡು ತಾತ್ಕಾಲಿಕವಾಗಿ ಬೀಗ ಹಾಕಿದರು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಹಾರ ಸುರಕ್ಷತೆ ಇಲಾಖೆ ಅಂಕಿತಾಧಿಕಾರಿ ಡಾ.ರಾಕೇಶ್, ನಗರಸಭೆ ಪೌರಾಯುಕ್ತ ನವೀನ್ ಚಂದ್ರ, ನೋಡೆಲ್ ಅಧಿಕಾರಿ ಜಿ.ಪಿ.ಪ್ರತೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾರಾಯಸ್ವಾಮಿ ದಾಳಿ ನಡೆಸಿ ಪರಿಶೀಲಿಸಿದರು. ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಜ್ಯೂಸ್ ಕೌಂಟರ್, ಅಡುಗೆ ಕೋಣೆ, ಉಗ್ರಾಣ ವೀಕ್ಷಿಸಿದಾಗ ಕೊಳೆತ ತರಕಾರಿ, ತುಕ್ಕು ಹಿಡಿದ ಫ್ರಿಜ್, ಸ್ವಚ್ಛತೆ ಇಲ್ಲದೆ ಇರುವುದು, ಹೋಟೆಲ್ ಕಾರ್ಮಿಕರಿಗೆ ರಕ್ಷಣೆ ಕಲ್ಪಿಸದೆ ಇರುವುದು ಕಂಡು ಬಂದಿದೆ. ಈ ಹಿಂದೆ ದಾಳಿ ನಡೆಸಿದಾಗ ಈ ಎಲ್ಲಾ ಲೋಪಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದಾಗ್ಯೂ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳು ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ದಾಳಿ ಮಾಡಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆ ವರದಿ ಬಂದಿದ್ದು ನೀರು ಕಲುಷಿತವಾಗಿರುವುದು ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ದಾಳಿ ಮಾಡಿ ಮತ್ತೊಮ್ಮೆ ಅಧಿಕಾರಿಗಳ ತಂಡವು ಪರಿಶೀಲಿಸಿ ಕ್ರಮವಹಿಸಿದೆ.
ಕೋಣೆಗೆಯಲ್ಲಿ ನಿಂತಿದ್ದ ನೀರು, ಇಡ್ಲಿ ಹಾಗೂ ದೋಸೆ ರುಬ್ಬುವ ಗ್ಲೈಂಡರ್ ಅನೈರ್ಮಲ್ಯ, ಚಾವಣಿಯ ಬಣ್ಣ ಉದುರಿ ಬೀಳುತ್ತಿರುವುದು, ತುಕ್ಕು ಹಿಡಿದಿದ್ದ ಅಡುಗೆ ಯಂತ್ರಗಳನ್ನು ಕಂಡು ಅಧಿಕಾರಿಗಳು ಹೋಟೆಲ್ ಮಾಲೀಕ ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಆಹಾರ ಸುರಕ್ಷತೆ ನಿಯಮ ಪಾಲಿಸಿಲ್ಲ ಎಂಬ ಆರೋಪದಡಿ ಬೀಗ ಜಡಿದಿದ್ದಾರೆ.
ಹೋಟೆಲ್ನಲ್ಲಿನ ನೀರು ಕಲುಷಿತವೆಂದು ಸಾಬೀತು ಕೊಳೆತ ತರಕಾರಿ, ತುಕ್ಕು ಹಿಡಿದ ಫ್ರಿಜ್, ಎಲ್ಲೆಲ್ಲೂ ಅನೈರ್ಮಲ್ಯ ಹೋಟೆಲ್ ಮಾಲೀಕರಿಗೆ ತರಾಟೆ
ಎಚ್ಚರಿಕೆ ನೀಡಿಯೂ ಸರಿಪಡಿಸಿಕೊಂಡಿಲ್ಲ ಈ ಹಿಂದೆ ದಾಳಿ ಮಾಡಿದಾಗ ನ್ಯೂನತೆಗಳು ಕಂಡು ಬಂದಿದ್ದು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಇದೀಗ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಹೀಗಾಗಿ ತಾತ್ಕಲಿಕವಾಗಿ ಬೀಗ ಹಾಕಲಾಗಿದೆ ಎಂದು ಆಹಾರ ಸುರಕ್ಷತೆ ಇಲಾಖೆ ಅಂಕಿತಾಧಿಕಾರಿ ಡಾ.ರಾಕೇಶ್ ಹೇಳಿದರು. ಗ್ರಾಹಕರಿಗೆ ಶುದ್ಧ ನೀರು ನೀಡಲು ಉಪಕರಣ ಅಳವಡಿಸದೆ ಇರುವುದು ಹೋಟೆಲ್ ನೌಕರರ ವೈಯಕ್ತಿಕ ಸ್ವಚ್ಛತೆ ಸಮರ್ಪಕವಾಗಿಲ್ಲ. ಕೈಗಳಿಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಟೋಪಿ ನೀಡಿಲ್ಲ. ನೊಣ ಕೀಟಗಳ ನಿಯಂತ್ರಣಕ್ಕಾಗಿ ಕ್ರಮವಹಿಸಿಲ್ಲ. ಆಹಾರ ತಯಾರು ಮಾಡುವ ಕೊಠಡಿ ಸಂಗ್ರಹ ಹಾಗೂ ಮಾರಾಟ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.