ADVERTISEMENT

ಕೋಲಾರ: ಗಣಿಗಾರಿಕೆ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಎಸ್.ಅಗ್ರಹಾರ, ಇರಗಸಂದ್ರದ ಬಳಿ ಗಣಿಗಾರಿಕೆಗೆ ಅನುಮತಿ ನೀಡಬೇಡಿ; ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:43 IST
Last Updated 3 ಡಿಸೆಂಬರ್ 2025, 6:43 IST
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗೇಟ್ ಬಳಿ ಮಂಗಳವಾರ ಗ್ರಾಮಸ್ಥರು ಹಾಗೂ ರೈತರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗೇಟ್ ಬಳಿ ಮಂಗಳವಾರ ಗ್ರಾಮಸ್ಥರು ಹಾಗೂ ರೈತರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು    

ಕೋಲಾರ: ತಾಲ್ಲೂಕಿನ ಸುಗಟೂರು ಹೋಬಳಿಯ ಎಸ್.ಅಗ್ರಹಾರ ಸರ್ವೆ ಸಂಖ್ಯೆ 60 ಹಾಗೂ ಇರಗಸಂದ್ರ ಸರ್ವೆ ಸಂಖ್ಯೆ 52 ರಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿ ಸುತ್ತಲಿನ ಗ್ರಾಮಸ್ಥರು ಮತ್ತು ರೈತರು ಮಂಗಳವಾರ ಚಿಟ್ನಹಳ್ಳಿ ಗೇಟ್ ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಕೆರೆ, ದೇವಸ್ಥಾನ, ಪರಿಸರ, ಜಾನುವಾರು ಮತ್ತು ಕಾಡು ಪ್ರಾಣಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪರಿಸರ, ಗಣಿ, ಕಂದಾಯ ಅಧಿಕಾರಿಗಳಿಗೆ ಮನವಿ ನೀಡಿದರು.

ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿರುವ ಜಮೀನಿನ ಪಕ್ಕದಲ್ಲಿಯೇ ಹತ್ತಾರು ಹಳ್ಳಿಗಳಿಗೆ ನೀರು ಪೂರೈಸುವ ಕೆರೆ ಇದೆ. ಪಕ್ಕದಲ್ಲಿಯೇ ಚೌಡೇಶ್ವರಿ ದೇವಸ್ಥಾನ ಇದ್ದು, ಪ್ರತಿ ವರ್ಷ 10 ಸಾವಿರ ಭಕ್ತಾದಿಗಳು ಸೇರುವ ಪ್ರದೇಶವಾಗಿದೆ. ಅಲ್ಲದೆ, ಸಾವಿರಾರು ಜಿಂಕೆಗಳು, ನವಿಲುಗಳು, ಕಾಡು ಪ್ರಾಣಿಗಳು ಈ ಕೆರೆಯಲ್ಲಿ ನೀರು ಕುಡಿಯುತ್ತಿರುತ್ತವೆ. ಒಂದು ವೇಳೆ ಗಣಿಗಾರಿಕೆಗೆ ಅವಕಾಶಕೊಟ್ಟರೆ ಕೆರೆ ಹಾಳಾಗಲಿದ್ದು, ಪರಿಸರ ಮಾಲಿನ್ಯವಾಗಲಿದೆ. ದೂಳಿನಿಂದ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸರ್ವೆ ಸಂಖ್ಯೆ 60 ಹಾಗೂ 52 ರಲ್ಲಿ 120 ಎಕರೆ ಸರ್ಕಾರಿ ಗೋಮಾಳ ಜಮೀನು ಇದೆ. ಭೂಮಿ ಇಲ್ಲದ 40ಕ್ಕೂ ಹೆಚ್ಚು ಅತಿ ಸಣ್ಣ ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಬೆಂಗಳೂರು ಮೂಲದವರು ಗಣಿಗಾರಿಕೆ ಮಾಡಲು ಮೂರು ಅರ್ಜಿಗಳನ್ನು ಸುಮಾರು 12 ಎಕರೆ ಜಮೀನಿಗೆ ಸಲ್ಲಿಸಿದ್ದು, ಕೆಲವು ರಾಜಕೀಯ ವ್ಯಕ್ತಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವುದು ಗೊತ್ತಾಗಿದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ವರ್ಷದಿಂದ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಸುತ್ತಮುತ್ತಲ ಗ್ರಾಮಸ್ಥರು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಆ ಮನವಿಯನ್ನು ಮರೆಮಾಚಿ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಪರವಾನಿಗೆ ನೀಡಲು ಸೂಚಿಸಿರುವುದು ನ್ಯಾಯವೇ ಎಂದು ಪ್ರಶ್ನೆ ಮಾಡಿದರು.

ತೊಟ್ಲಿ ಗ್ರಾಮಸ್ಥ ಟಿ.ವಿ.ರಮೇಶ್‌ ಮಾತನಾಡಿ, ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಗ್ರಾಮ ಪಂಚಾಯಿತಿಯಿಂದ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಅರ್ಜಿ ನೀಡಲಾಗಿದೆ. ಆದರೂ ಜಗುತ್ತಿಲ್ಲ. ಹೀಗಾಗಿ, ಹೆದ್ದಾರಿ ಬಂದ್‌ ಮಾಡಿ ಚಿಟ್ನಹಳ್ಳಿ ಬಸ್‌ ನಿಲ್ದಾಣ ಬಳಿ ಪ್ರತಿಭಟನೆ ನಡೆಸಲಾಯಿತು ಎಂದರು.

ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಕಾಂತರಾಜ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್‌ ನೀಡಿದ್ದರು.

ಹೋರಾಟದಲ್ಲಿ ಗ್ರಾಮ ಪಂಚಾಯಿತಿಯ ಸದ್ಯಸ್ಯರಾದ ನಂದೀಶ್, ಅರ್ಜುನ್, ನಾಗೇಶ್, ಭೂಪತಿಗೌಡ, ಮಾದಮಂಗಲ ನಾಗರಾಜ, ಭಾಸ್ಕರ, ಕೃಷ್ಣಪ್ಪ, ಮಂಜುನಾಥ, ಯಳೇಗೌಡ, ರಾಮು, ತಿಮ್ಮಣ್ಣ, ಗಿರೀಶ್, ರಾಜು, ಆಂಜಿನಪ್ಪ, ನಾಗರಾಜ್, ಕೃಷ್ಣಪ್ಪ, ಚಂದ್ರು, ಮುನಿಶಾಮಪ್ಪ, ಶ್ರೀನಿವಾಸ್, ವೆಂಕಟರವಣಪ್ಪ, ಹತ್ತಾರು ಹಳ್ಳಿಯ ನೂರಾರು ರೈತರು ಹಾಗೂ ರೈತ ಕೂಲಿಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.