ADVERTISEMENT

ಕೋಲಾರ: ಪೊಲೀಸರ ಆಟ, ಓಟ, ನಲಿದಾಟ!

ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ; ಎಸ್‌ಪಿ, ಡಿಸಿಎಫ್‌ ಭಾಗಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:16 IST
Last Updated 20 ನವೆಂಬರ್ 2025, 2:16 IST
ಕೋಲಾರದಲ್ಲಿ ಬುಧವಾರ ಆರಂಭವಾದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಕ್ರೀಡಾಪಟುವಿನಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು. ಎಸ್‌ಪಿ ನಿಖಿಲ್‌ ಬಿ., ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಬುಧವಾರ ಆರಂಭವಾದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಕ್ರೀಡಾಪಟುವಿನಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು. ಎಸ್‌ಪಿ ನಿಖಿಲ್‌ ಬಿ., ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌ ಪಾಲ್ಗೊಂಡಿದ್ದರು   

ಕೋಲಾರ: ನಿತ್ಯ ಅಪರಾಧಿಗಳ ಬೆನ್ನಟ್ಟುವ, ವಿವಿಧ ಪ್ರಕರಣ ಭೇದಿಸುವ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದಾ ಎಚ್ಚರವಾಗಿ ಕರ್ತವ್ಯದಲ್ಲಿ ತೊಡಗಿರುವ ಹಾಗೂ ಒತ್ತಡದಲ್ಲಿರುವ ಪೊಲೀಸರು ಕ್ರೀಡಾಂಗಣದಲ್ಲಿ ಆಟ, ಓಟದಲ್ಲಿ ಪಾಲ್ಗೊಂಡು ನಲಿದಾಡಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕೋಲಾರ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟ ಬುಧವಾರ ಆರಂಭವಾಗಿದ್ದು, ಶುಕ್ರವಾರದವರೆಗೆ ನಡೆಯಲಿದೆ. ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಡಿಸಿಎಫ್‌ ಸರೀನಾ ಸಿಕ್ಕಲಿಗಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಶಂಕರ್‌, ಜಗದೀಶ್‌, ಡಿವೈಎಸ್ಪಿಗಳಾದ ಎಂ.ಎಚ್‌.ನಾಗ್ತೆ, ಮನಿಷಾ, ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ಎಂ.ಆರ್.ರವಿ ಮಾತನಾಡಿ, ‘ಪೊಲೀಸರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ, ನವಚೈತನ್ಯದಿಂದ ಕರ್ತವ್ಯಕ್ಕೆ ಮರಳಿ ಬನ್ನಿ’ ಎಂದ ಕರೆ ನೀಡಿದರು.

ಪೊಲೀಸರು ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಘನತೆಯಿಂದ ನಿರ್ವಹಿಸಬೇಕಾಗುತ್ತದೆ. ಹೀಗಾಗಿ, ಬಹಳ ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಇದೆ. ಒತ್ತಡ ನೀಗಿಸಿಕೊಳ್ಳುವುದು ಕೂಡ ಅಷ್ಟೇ ಅಗತ್ಯವಿದೆ ಎಂದರು.

ಒತ್ತಡಗಳಿಂದ ಹೊರಬಂದು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತದೆ. ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಬೇಕು, ಸೋಲು ಗೆಲುವು ಪ್ರಶ್ನೆಯಲ್ಲ, ಅಂತಿಮವಾಗಿ ಕ್ರೀಡಾಕೂಟದ ಕೊನೆಯಲ್ಲಿ ಹೊಸ ಚೈತನ್ಯ ತುಂಬಿಕೊಂಡು ಹೊಸ ಹೊಸ ಸವಾಲುಗಳನ್ನು ಎದುರಿಸುವಂತಹ ಆತ್ಮವಿಶ್ವಾಸವನ್ನು ಪಡೆಯಲು ಈ ಕ್ರೀಡಾಕೂಟ ಸಹಕಾರಿಯಾಗಲಿ ಎಂದು ಆಶಿಸಿದರು.

ಪೊಲೀಸರಲ್ಲೂ ಬಹಳ ಜನ ಸಾಂಸ್ಕೃತಿಕ ಪ್ರತಿಭೆ ಹೊಂದಿರುವವರಿದ್ದಾರೆ, ನಮ್ಮಲ್ಲಿಯೂ ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆ ಇದೆ, ಸಮಾಜದ ಇತರೆ ಜನರೊಂದಿಗೆ ಬೆರೆಯುವ ನಮ್ಮ ಭಾವನೆಗಳನ್ನೂ ಗೌರವಿಸಿ ಎಂಬುವ ಸಂದೇಶ ಒಳ್ಳೆಯದು ಎಂದು ಹೇಳಿದರು.

ಸರೀನಾ ಸಿಕ್ಕಲಿಗಾರ್ ಮಾತನಾಡಿ, ಪೊಲೀಸರು ದೇಶದ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ, ಆದುದ್ದರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಮಲಗುತ್ತೇವೆ ಎಂದರು.

ಒತ್ತಡದಲ್ಲಿ ಕೆಲಸ ಮಾಡಿದರೂ ಅರಣ್ಯ ಇಲಾಖೆಗೂ ಪೊಲೀಸರು ಸಹಕಾರ ನೀಡಿದ್ದಾರೆ, ಅದಕ್ಕಾಗಿ ಧನ್ಯವಾದ ಎಂದ ಅವರು, ಪೊಲೀಸರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಮುಖ್ಯವಾಗಿದೆ, ಕ್ರೀಡಾಕೂಟದಲ್ಲಿ ಸೋಲು ಗೆಲುವುಗಿಂತ ಕ್ರೀಡಾ ಸ್ಪೂರ್ತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.

ನಿಖಿಲ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ತುಕಡಿಗಳಿಂದ ನಡೆದ ಪಥಸಂಚಲನ ಗಮನ ಸೆಳೆಯಿತು. ಜಿಲ್ಲಾಧಿಕಾರಿಯು ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕ್ರೀಡಾಪಟುಗಳು ಪ್ರಮಾಣವಚನ ಸ್ವೀಕರಿಸಿದರು. ನ.21ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ವಲಯ ಐಜಿಪಿ ಲಾಭೂ ರಾಮ್‌ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಓಟ ಆರಂಭಿಸಿದ ಸಂದರ್ಭ

ಕೆಜಿಎಪ್‌ನಲ್ಲಿ ಇಂದು ಆರಂಭ

ಕೆಜಿಎಫ್ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟ ಚಾಂಪಿಯನ್‍ರೀಪ್ಸ್‌ನಲ್ಲಿರುವ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಉದ್ಘಾಟಿಸಲಿದ್ದಾರೆ. ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅಧ್ಯಕ್ಷತೆ ವಹಿಸಲಿದ್ದಾರೆ. ನ.22ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಕೇಂದ್ರ ವಲಯ ಐಜಿಪಿ ಲಾಭೂ ರಾಮ್ ಪಾಲ್ಗೊಂಡು ಬಹುಮಾನ ವಿತರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.