
ಕೆಜಿಎಫ್: ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಶನಿವಾರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಜ್ಯೋತಿ ಬಸು, ಬೆಂಗಳೂರಿನಿಂದ ಬರುತ್ತಿರುವ ಕೊಳಚೆ ನೀರಿನಿಂದಾಗಿ ಕಾಯಿಲೆಗಳು ಬರುತ್ತಿದೆ. ಜಿಲ್ಲೆಗೆ ಉತ್ತಮ ನೀರು ಸಿಗಬೇಕು. ಅದನ್ನು ನಾವು ಉಪಯೋಗಿಸಬೇಕು ಎಂಬುದು ಹಕ್ಕಾಗಿದೆ. ಆದ್ದರಿಂದ ತಾಲ್ಲೂಕಿನ ಪಕ್ಕದಲ್ಲಿಯೇ ಹರಿದು ಹೋಗುತ್ತಿರುವ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಕೂಡ ಕೊಡಬೇಕು. ಈ ನಿಟ್ಟಿನಲ್ಲಿ ಹೋರಾಟ ನಡೆಸುವುದು ಅಗತ್ಯವಾಗಿದೆ. ಶಾಶ್ವತ ಕುಡಿಯುವ ನೀರಿಗಾಗಿ ಒತ್ತಾಯಿಸಿ ತೆಲಂಗಾಣ ಮಾದರಿ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ವಕೀಲರ ಸಂಘ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಹೇಳಿದರು.
ಬೇತಮಂಗಲದಿಂದ ನಗರಕ್ಕೆ ನೀರು ಬರುತ್ತಿಲ್ಲ. ಇದರಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದೆ. ಜನ ಟ್ಯಾಂಕರ್ ಮೂಲಕ ನೀರನ್ನು ಕುಡಿಯುವ ಪರಿಸ್ಥಿತಿ ಬಂದಿದೆ. ಕೂಡಲೇ ಟ್ಯಾಂಕರ್ ನೀರನ್ನು ಕೊನೆಗಾಣಿಸಿ ಸಮರ್ಪಕ ನೀರು ಕೊಡಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲ ಗೌಡ ಮಾತನಾಡಿ, ಶಾಶ್ವತ ನೀರಿಗಾಗಿ ಒತ್ತಾಯಿಸಿ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಕೀಲರು ಬೆಂಬಲ ನೀಡುತ್ತಿದ್ದಾರೆ. ಕೊಳಚೆ ನೀರಿನಿಂದಾಗಿ ಕೊಳವೆ ಬಾವಿಗಳು ಕೂಡ ಕಲುಷಿತಗೊಂಡಿದೆ. ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಕುಪ್ಪಂ ಬಳಿ ಹಾದು ಹೋಗುವ ನೀರನ್ನು ತಾಲ್ಲೂಕಿಗೆ ಸುಲಭವಾಗಿ ಪಡೆಯಬಹುದು. ಯರಗೋಳ್ ಯೋಜನೆ ಕೂಡ ನಮ್ಮ ತಾಲ್ಲೂಕಿಗೆ ಹತ್ತು ಕಿ.ಮೀ ದೂರ ಇದೆ. ಅದನ್ನು ಕೂಡ ತಾಲ್ಲೂಕಿಗೆ ಹರಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಎಚ್.ಜೆ. ಭರತ್ ಮನವಿ ಪತ್ರ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.