ಶ್ರೀನಿವಾಸಪುರ: ‘ಈ ಭಾಗದಲ್ಲಿ ಅನೇಕ ದಲಿತರು, ಕಡುಬಡವ ರೈತರಿದ್ದು ಸರ್ಕಾರಕ್ಕೆ ಭೂಮಿ ನೀಡಿದರೆ ನಿರ್ಗತಿಕರಾಗುವುದು ಖಚಿತ. ಬಲವಂತವಾಗಿ ಒಂದು ಗುಂಟೆ ಜಮೀನನನ್ನೂ ಸ್ವಾಧೀನ ಮಾಡಲು ಬಿಡಲ್ಲ. ಇಷ್ಟಾಗಿಯೂ ಜಮೀನು ಪಡೆಯಲು ಮುಂದಾದರೆ ಭೂಮಿ ಉಳಿಸಲು ದೇವನಹಳ್ಳಿ ರೀತಿ ಹೋರಾಟ ನಡೆಸುತ್ತೇವೆ’ ಎಂದು ಕ್ಷೇತ್ರದ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಯದರೂರು ಗ್ರಾಮದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ವಿಚಾರವಾಗಿ ಶುಕ್ರವಾರ ಭೂಸ್ವಾಧೀನ ಅಧಿಕಾರಿಗಳು ಹಾಗೂ ರೈತರೊಂದಿಗಿನ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ನಡೆದ ಸಭೆಯಲ್ಲಿ ಭೂಮಿ ಕೊಡುವುದಿಲ್ಲ ಎಂಬುದಾಗಿ ರೈತರು ಬರೆದುಕೊಟ್ಟಿದ್ದಾರೆ. ಈಗಲೂ ಅದೇ ರೀತಿ ಬರೆದುಕೊಟ್ಟಿದ್ದಾರೆ’ ಎಂದರು.
‘ಕೈಗಾರಿಕಾ ವಲಯ ಸ್ಥಾಪಿಸಲು 1,044 ಎಕರೆ ಸರ್ವೇ ಭೂಮಿಯನ್ನು ವಶಕ್ಕೆ ಪಡೆಯಲು ತೀರ್ಮಾನಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಭೂಸ್ವಾಧೀನ ಮಾಡಿಕೊಳ್ಳಲು ನೋಟಿಸ್ ಕೂಡ ನೀಡಿದೆ. ನೋಟಿಸ್ ಬಂದಿರುವ ರೈತರನ್ನು ನಾನೂ ಮಾತನಾಡಿಸಿದ್ದೇನೆ. ಭೂಮಿಯನ್ನು ಕೊಡುವುದಾಗಿ ಹೇಳುವ ಯಾವೊಬ್ಬ ರೈತರೂ ಸ್ಥಳಕ್ಕೆ ಬಂದಿಲ್ಲ. ನನ್ನ ಬಳಿ ಬಂದ 79 ರೈತರು ತನಗೆ ಕೇವಲ 3 ಗುಂಟೆ ಇದೆ, 6 ಗುಂಟೆ ಇದೆ, 1 ಎಕರೆ ಜಮೀನು ಇದೆ ಎಂದು ಹೇಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಭೂಮಿ ಕೊಡುವುದಿಲ್ಲ ಎಂದಿದ್ದಾರೆ. ಇಲ್ಲಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ. ಆದರೆ, ಇಲ್ಲಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗಿ ಅಧಿಸೂಚನೆ ಆಗಿದೆ’ ಎಂದು ಹೇಳಿದರು.
‘ಈಚೆಗೆ ಮುಖ್ಯಮಂತ್ರಿ ದೇವನಹಳ್ಳಿಯ ಭೂಸ್ವಾದೀನದ ಬಗ್ಗೆ ಇಷ್ಟವಿಲ್ಲದೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಭೂಸ್ವಾಧೀನವನ್ನು ಕೈಬಿಟ್ಟಿದ್ದಾರೆ. ಸ್ವಇಚ್ಛೆಯಿಂದ ಕೊಡುವವರು ಕೊಡಲಿ, ಯಾವುದೇ ಕಾರಣಕ್ಕೂ ಬಲವಂತವಾಗಿ ಭೂಮಿಯನ್ನು ವಶಕ್ಕೆ ಪಡೆಯಬಾರದೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸರ್ಕಾರದ ಭೂಮಿ ಇದ್ದರೆ ಸಾವಕಾಶವಾಗಿ ಕೈಗಾರಿಕಾ ವಲಯ ಸ್ಥಾಪಿಸಿ ನಮ್ಮ ಅಭ್ಯಂತರವಿಲ್ಲ. ಬಲವಂತವಾಗಿ ಭೂಮಿಯನ್ನು ಪಡೆದರೆ ಭೂಮಿ ಉಳಿಸಲು ದೇವನಹಳ್ಳಿ ರೀತಿ ಮತ್ತೊಂದು ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ವಿಶೇಷ ಭೂಸ್ವಾಧೀನ ಅಧಿಕಾರಿ ಎಚ್.ಎಸ್.ವೆಂಕಟಲಕ್ಷ್ಮಿ ಮಾತನಾಡಿ, ‘1,273 ಎಕರೆ 24 ಗುಂಟೆಗೆ 2024ರಲ್ಲಿಯೇ ಕೆಐಎಡಿಬಿ ಕಡೆಯಿಂದ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಈಗಾಗಲೇ ಶೇ 70 ರಷ್ಟು ವಿಚಾರಣೆ ಮುಗಿದಿದೆ. ಒಟ್ಟು 372 ಖಾತೆ ಸಂಖ್ಯೆಗಳು ಇದ್ದು, 150 ಸರ್ವೇ ನಂಬರ್ ಉಳಿದಿವೆ. ಈ ಹಿಂದೆ ಗೈರುಹಾಜರಾದವರಿಗೆ ಶುಕ್ರವಾರ ಅವಕಾಶ ನೀಡಿ ವಿಚಾರಣೆಗೆ ಬಂದಿದ್ದೇವೆ’ ಎಂದರು.
ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಮುಖಂಡರಾದ ಬ್ಯಾಟಪ್ಪ, ಯಲ್ದೂರು ಗೌರಮ್ಮ, ಸುಧಾಕರ್, ಪಾತಕೋಟೆ ನವೀನ್ಕುಮಾರ್, ಸುರೇಶ್ಗೌಡ, ಕೊಳತೂರು ಶ್ರೀನಿವಾಸ್, ಕೋಡಿಪಲ್ಲಿ ವಿಶ್ವ, ಅಡಿಚಂಬಕೂರು ಗೋಪಾಲ್, ಯದರೂರು ಕೃಷ್ಣಪ್ಪ, ಲಕ್ಷ್ಮೀಸಾಗರ ವಿನೋದ್ ಇದ್ದರು.
ರೈತರು ಸ್ವಇಚ್ಛೆಯಿಂದ ತಮ್ಮ ಭೂಮಿ ಕೊಟ್ಟರೆ ತೊಗೊಳ್ಳಿ. ರೈತರು ಕೊಡುವುದಿಲ್ಲವೆಂದರೆ ಆ ಜಮೀನನ್ನು ಬಲವಂತದಿಂದ ಮುಟ್ಟಬೇಡಿ. ಅವರ ರಕ್ಷಣೆಗೆ ನಾವಿದ್ದೇವೆ–ಕೆ.ಆರ್.ರಮೇಶ್ ಕುಮಾರ್, ಮಾಜಿ ಶಾಸಕ
ಭೂಸ್ವಾಧೀನ ಸಂಬಂಧ ಈ ಹಿಂದೆಯೇ ರೈತರಿಗೆ ನೋಟಿಸ್ ನೀಡಿ ಗಮನಕ್ಕೆ ತಂದಿದ್ದೆವು. ರೈತರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಅಲ್ಲಿಯೇ ಈ ಬಗ್ಗೆ ತೀರ್ಮಾನ ಆಗಬೇಕಿದೆ–ಎಚ್.ಎಸ್.ವೆಂಕಟಲಕ್ಷ್ಮಿ ವಿಶೇಷ ಭೂಸ್ವಾಧೀನಾಧಿಕಾರಿ
ನಾವು ಯಾರೂ ಬ್ರೋಕರ್ಸ್ ಅಲ್ಲ
‘ನಾವು ಯಾರೂ ಬ್ರೋಕರ್ಸ್ ಅಲ್ಲ. ಇಲ್ಲಿಗೆ ರಾಜಕಾರಣ ಮಾಡಲು ನಾನು ಬಂದಿಲ್ಲ. ನಾನು ಎರಡು ಮೂರು ತಿಂಗಳಿನಿಂದ ಹೊರಗಡೆಯೇ ಬಂದಿಲ್ಲ. ಜನರ ಬದುಕಿನ ಸಮಸ್ಯೆ ಎಂಬ ಕಾರಣಕ್ಕೆ ನಾನು ಮನೆ ದಾಟಿ ಹೊರಗೆ ಬಂದಿದ್ದೇನೆ’ ಎಂದು ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.