ADVERTISEMENT

ಬಿಜೆಪಿ ಅಧ್ಯಕ್ಷನ ವಿರುದ್ಧ ಭೂಕಬಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:59 IST
Last Updated 19 ಡಿಸೆಂಬರ್ 2019, 9:59 IST

ಕೆಜಿಎಫ್‌: ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಈಚೆಗೆ ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವಿಭಾಗದ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಜಯಪ್ರಕಾಶ್ ನಾಯ್ಡು ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ಜನಾಧಿಕಾರ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ.

ಜಯಪ್ರಕಾಶ್ ನಾಯ್ಡು (ಬುಜ್ಜಿ ನಾಯ್ಡು) ಅವರು 250 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ವಶಮಾಡಿಕೊಂಡಿದ್ದಾರೆ. ಇವುಗಳಲ್ಲಿ ಸ್ಮಶಾನ, ಗುಂಡುತೋಪು ಮತ್ತು ಗೋಮಾಳ ಜಮೀನು ಸೇರಿದೆ. ಜಮೀನಿನ ವಿವರಗಳನ್ನು ದಾಖಲೆ ಸಮೇತ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ನೀಡಲಾಗಿದೆ. ಹೋರಾಟ ಕೂಡ ನಡೆಸಲಾಗಿದೆ. ಅಕ್ರಮವಾಗಿ ವಶಪಡಿಸಿಕೊಂಡಿರುವ ಸರ್ಕಾರಿ ಜಮೀನನ್ನು ಬೆನ್ನವಾರ ಗ್ರಾಮದ ಭೂ ರಹಿತ ಬಡವರಿಗೆ ನೀಡಬೇಕು ಎಂದು ಕೋರಲಾಗಿತ್ತು. ಆದರೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ

ಬೆನ್ನವಾರ ಗ್ರಾಮದ ಸರ್ವೆ ನಂಬರ್‌ 65 ರಲ್ಲಿ 137 ಎಕರೆ, ಸರ್ವೆ ನಂಬರ್ 45 ರಲ್ಲಿ 107 ಎಕರೆ ಮತ್ತು ಸರ್ವೆ ನಂಬರ್ 49 ರಲ್ಲಿ 87 ಎಕರೆ ಜಮೀನನ್ನು ಸರ್ವೆ ಮಾಡಿಸಿ, ಜಮೀನನ್ನು ವಶಕ್ಕೆ ತೆಗೆದುಕೊಳ್ಳಬೇಕು. ಆಂಧ್ರ ಮೂಲಕ ವ್ಯಕ್ತಿಗೆ ಕರ್ನಾಟಕದ ಜಮೀನು ಮಂಜೂರು ಮಾಡಿ, ಪಹಣಿ ಹತ್ತಿಸಿರುವುದರ ಬಗ್ಗೆ ತನಿಖೆ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ADVERTISEMENT

ಬಿಜೆಪಿ ಮುಖಂಡನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಫಲವಾಗಿರುವ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಬುಧವಾರ ಅನಿರ್ಧಿಷ್ಟಕಾಲದ ಧರಣಿಯನ್ನು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖಂಡ ರಾಮಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.