ADVERTISEMENT

ಕುರುಬ ಸಮುದಾಯ ಭವನಕ್ಕೆ ಜಮೀನು

ಕನಕದಾಸ ಜಯಂತಿಯಲ್ಲಿ ಸಂಸದ ಮುನಿಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:08 IST
Last Updated 3 ಡಿಸೆಂಬರ್ 2020, 15:08 IST
ಕೋಲಾರದಲ್ಲಿ ಗುರುವಾರ ನಡೆದ ಕನಕದಾಸರ ಜಯಂತಿಯಲ್ಲಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಸಂಸದ ಎಸ್.ಮುನಿಸ್ವಾಮಿ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು.
ಕೋಲಾರದಲ್ಲಿ ಗುರುವಾರ ನಡೆದ ಕನಕದಾಸರ ಜಯಂತಿಯಲ್ಲಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಸಂಸದ ಎಸ್.ಮುನಿಸ್ವಾಮಿ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಿದರು.   

ಕೋಲಾರ: ‘ಕುರುಬ ಸಮುದಾಯದ ಭವನ ನಿರ್ಮಾಣಕ್ಕೆ ಜಮೀನು ನೀಡುವ ಸಂಬಂಧ ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಭರವಸೆ ನೀಡಿದರು.

ಜಿಲ್ಲಾ ಕುರುಬರ ಸಂಘವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕುರುಬ ಸಮುದಾಯದ ಜನಸಂಖ್ಯೆ ಸುಮಾರು 3 ಲಕ್ಷವಿದೆ. ಸಮುದಾಯದ ಮುಖಂಡರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಬಳಿ ಬೇಡಿಕೆ ಮುಂದಿಟ್ಟು ಕೈಚೆಲ್ಲಬಾರದು. ಬೇಡಿಕೆ ಸಂಬಂಧ ಏನು ಕ್ರಮವಾಗಿದೆ ಎಂದು ಆಗಾಗ್ಗೆ ಪರಿಶೀಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಮುಂದಿನ ವರ್ಷ ಕನಕದಾಸರ ಜಯಂತಿ ಆಚರಣೆ ವೇಳೆಗೆ ಜಿಲ್ಲಾ ಕೇಂದ್ರದಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪನೆ ಮಾಡುತ್ತೇವೆ. ಪ್ರತಿಮೆ ಅನಾವರಣ ಮಾಡಿಯೇ ಜಯಂತಿ ಆಚರಿಸಲಾಗುವುದು. ಪ್ರತಿಮೆಯ ಎತ್ತರ ಮತ್ತು ಎಲ್ಲಿ ಪ್ರತಿಮೆ ಮಾಡಿಸಬೇಕೆಂಬ ಬಗ್ಗೆ ಸಮುದಾಯದ ಮುಖಂಡರು ನಿರ್ಧಾರ ಕೈಗೊಂಡು ಪ್ರಸ್ತಾವ ಸಲ್ಲಿಸಿದರೆ ಹಣಕಾಸು ನೆರವು ನೀಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಎಲ್ಲಾ ಸಮುದಾಯಗಳಲ್ಲೂ ಮಹನೀಯರು ಇದ್ದಾರೆ. ಅವರಲ್ಲಿ ಅನೇಕರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ತತ್ವಾದರ್ಶ ಸಮಾಜಕ್ಕೆ ಮಾದರಿ. ಯಡಿಯೂರಪ್ಪ ಅವರು ಕನಕದಾಸರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಆದೇಶ ಹೊರಡಿಸಿದರು’ ಎಂದು ವಿವರಿಸಿದರು.

‘ಸರ್ಕಾರದ ಯೋಜನೆಗಳು ಸಮುದಾಯಕ್ಕೆ ತಲುಪಬೇಕು. ಸಮುದಾಯದ ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಸಮುದಾಯವು ಸೌಲಭ್ಯದಿಂದ ವಂಚಿತವಾಗುತ್ತದೆ. ಎಲ್ಲಾ ಜವಾಬ್ದಾರಿ ಜನಪ್ರತಿನಿಧಿಗಳ ಮೇಲೆ ಹಾಕಬಾರದು. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಮತ್ತು ಜಾತಿ ಬೇಧ ಮರೆತು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಹೋರಾಟಕ್ಕೆ ಕೈಜೋಡಿಸಿ: ‘ಕುರುಬ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಸಮುದಾಯದ ಎಲ್ಲರೂ ಈ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ರಾಜ್ಯ ಕುರುಬರ ಸಂಘದ ನಿರ್ದೇಶಕಿ ಸರಸ್ವತಮ್ಮ ಮನವಿ ಮಾಡಿದರು.

‘ಕುರುಬ ಸಮುದಾಯವನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ. ಸಮುದಾಯದಲ್ಲಿ ಒಗ್ಗಟ್ಟು ಇಲ್ಲದಿರುವುದು ಇದಕ್ಕೆ ಕಾರಣ. ಕುರುಬ ಭವನ ನಿರ್ಮಾಣಕ್ಕೆ 3.17 ಎಕರೆ ಜಮೀನು ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ವಿವರಿಸಿದರು.

ಒಗ್ಗೂಡಬೇಕು: ‘ಸಮಾಜದ ಏಳಿಗೆಗೆ ಎಲ್ಲರೂ ಒಗ್ಗೂಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಸುಶಿಕ್ಷಿತರಾಗಿ ಮಾಡಬೇಕು. ಸಮುದಾಯದ ಯುವಕರು ಮುಂಚೂಣಿಗೆ ಬರಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸಲಹೆ ನೀಡಿದರು.

ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ, ಮಹಿಳಾ ಘಟಕದ ಗೌರವಾಧ್ಯಕ್ಷೆ ಯಶೋದಾ, ತಾಲ್ಲೂಕು ಘಟಕದ ಅಧ್ಯಕ್ಷೆ ಶಾಂತಮ್ಮ, ನಗರಸಭೆ ಸದಸ್ಯ ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.