ಮಾಲೂರು: ತಾಲ್ಲೂಕಿನ ನೊಸಗೆರೆ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ₹ 23 ಲಕ್ಷ ವೆಚ್ಚದಡಿ ಗೋದಾಮು ನಿರ್ಮಾಣಕ್ಕೆ ಸಂಘದ ಅಧ್ಯಕ್ಷ ಆರ್. ಪ್ರಭಾಕರ್ ಭೂಮಿಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಒದಗಿಸಲು ಮಳಿಗೆ ಸೌಕರ್ಯ ಇಲ್ಲದೆ ತೊಂದರೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ನೊಸಗೆರೆ ಗ್ರಾ.ಪಂ.ನಿಂದ ಗೋದಾಮು ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದ್ದು, ಅತಿಶೀಘ್ರದಲ್ಲೇ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದರು.
ಗೋದಾಮಿನಿಂದ ರೈತರಿಗೆ ಹೆಚ್ಚಿನ ರೀತಿಯಲ್ಲಿ ರಸಗೊಬ್ಬರ ಪೂರೈಸಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಲಕ್ಕೂರು ಹೋಬಳಿ ವ್ಯಾಪ್ತಿಯ ರೈತರಿಗೆ ಅನುಕೂಲ ಕಲ್ಪಿಸಲು ಕೋಡಿಹಳ್ಳಿ ಗೇಟ್ ಬಳಿ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಮಳಿಗೆ ಆರಂಭಿಸಲಾಗುವುದು ಎಂದರು.
ಡಿಎಪಿ ಮತ್ತು 10:26 ರಸಗೊಬ್ಬರಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಖಾಸಗಿ ಮಾರಾಟಗಾರರು ಕಾಳಸಂತೆಯಲ್ಲಿ ಖರೀದಿ ಮಾಡಿ ರೈತರಿಂದ ಹೆಚ್ಚು ಹಣ ಪಡೆದು ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಗೊಬ್ಬರವನ್ನು ಸಮರ್ಪಕವಾಗಿ ಸರಬರಾಜು ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಆರ್. ನಾರಾಯಣಸ್ವಾಮಿ, ನಿರ್ದೇಶಕರಾದ ಮುನಿರಾಜು, ವೆಂಕಟೇಶಪ್ಪ, ನಾಗರಾಜು, ವೆಂಕಟರಮಣಪ್ಪ, ಡಿ.ಕೆ. ಕೃಷ್ಣಪ್ಪ, ಮುನಿರಾಜು, ಕಾರ್ಯದರ್ಶಿ ಸುಧಾಕರ್, ನೊಸಗೆರೆ ಗ್ರಾ.ಪಂ. ಅಧ್ಯಕ್ಷೆ ದೀಪಿಕಾ ಮೋಹನ್, ಸದಸ್ಯರಾದ ರಮೇಶ್, ಶ್ರೀನಿವಾಸ್, ಪಿಡಿಒ ಸಂಪರಾಜು, ಕಾರ್ಯದರ್ಶಿ ಸಿಂಧೂ, ನಾಗೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.