ADVERTISEMENT

ಸಾಹಿತ್ಯ ಮಾನವೀಯತೆ ಬೆಳೆಸುವ ಸಾಧನ: ಎನ್.ಬಿ. ಗೋಪಾಲಗೌಡ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2023, 6:30 IST
Last Updated 26 ಫೆಬ್ರುವರಿ 2023, 6:30 IST
ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್. ಚೌಡರೆಡ್ಡಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ಅವರು, ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು
ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್. ಚೌಡರೆಡ್ಡಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ಅವರು, ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು   

ಶ್ರೀನಿವಾಸಪುರ: ‘ಸಾಹಿತ್ಯ ಸಮಾಜದಲ್ಲಿ ಮಾನವೀಯತೆ ಬೆಳೆಸುವ ಸಾಧನವಾಗಬೇಕು. ಹಿಂಸಾ ಪರಿಸರ ತಿಳಿಗೊಳಿಸುವ ಉಪಕರಣವಾಗಬೇಕು’ ಎಂದು ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ಹೇಳಿದರು.

ಪಟ್ಟಣದಲ್ಲಿ ಸುಗಟೂರಿನ ಗೆಳೆಯರ ಬಳಗದಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಪನಸಮಾಕನಹಳ್ಳಿ ಆರ್. ಚೌಡರೆಡ್ಡಿ ಅವರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ₹ 40 ಸಾವಿರ ನಗದು ಒಳಗೊಂಡ ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಾಹಿತಿ ಬದುಕು ಮತ್ತು ಬರಹದ ಮಧ್ಯೆ ಸಮನ್ವಯ ಸಾಧಿಸಬೇಕು. ಬರೆದಂತೆ ಬದುಕಿದಾಗ ಮಾತ್ರ ಸಾಮಾಜಿಕ ಮನ್ನಣೆ ದೊರೆಯುತ್ತದೆ. ಆ ನಿಟ್ಟಿನಲ್ಲಿ ಚೌಡರೆಡ್ಡಿ ಮಾದರಿಯಾಗಿದ್ದಾರೆ. ಅವರ ಬರಹಗಳು ಸಮಾಜಮುಖಿಯಾಗಿದ್ದು, ಜೀವನ ಪ್ರೀತಿ ಬೆಳೆಸುತ್ತವೆ. ಅವರ ಕೃತಿಗಳಲ್ಲಿ ಮಾನವೀಯ ಮೌಲ್ಯ ಪ್ರಧಾನ ಅಂಶವಾಗಿದೆ ಎಂದು ಹೇಳಿದರು.

ADVERTISEMENT

ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೈ.ವಿ. ವೆಂಕಟಾಚಲ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದುಕೊಂಡು, ಪ್ರತಿ ತಿಂಗಳು ಸಂಬಳದಲ್ಲಿ ₹ 10 ಸಾವಿರ ಉಳಿಸಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ನೀಡುತ್ತಿರುವ ಎಸ್.ಆರ್. ಧರ್ಮೇಶ್ ಹೆಸರಲ್ಲಿ ಅವರ ಗೆಳೆಯರು ಪ್ರಶಸ್ತಿ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.

ಸಾಹಿತಿ ಎನ್. ಶಂಕರೇಗೌಡ ಮಾತನಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪಿ.ಎಸ್. ಮಂಜುಳಾ, ದಾಸ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಮಾಯಾ ಬಾಲಚಂದ್ರ, ಧರ್ಮೇಶ್ ಗೆಳೆಯರ ಬಳಗದ ಅಧ್ಯಕ್ಷ ಎಸ್.ಆರ್. ಧರ್ಮೇಶ್, ಕಾರ್ಯದರ್ಶಿ ವಿ. ರಾಮಪ್ಪ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡಿದರು.

ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ರಾಮಕೃಷ್ಣೇಗೌಡ, ಸಿಆರ್‌ಪಿ ನಟರಾಜ್, ಉಪನ್ಯಾಸಕರಾದ ಸೀತರೆಡ್ಡಿ, ನಾರಾಯಣಸ್ವಾಮಿ, ಪ್ರಾಂಶುಪಾಲ ಸೀನಪ್ಪ, ಡಾ.ಶಿವಕುಮಾರ್, ವಿಶ್ವನಾಥ ಸಿಂಗ್, ನಾಗೇಂದ್ರ, ನಿಶಾಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.