ಕೋಲಾರ: ಹುತಾತ್ಮ ಯೋಧರು, ಸ್ವಾತಂತ್ರ್ಯ ಯೋಧರು ಮತ್ತು ಅವರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರವನ್ನು (ಜಮೀನು) ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರಿದ ಆರೋಪದ ಮೇರೆಗೆ ಜಿಲ್ಲೆಯ ಉಪವಿಭಾಗಾಧಿಕಾರಿ ಮತ್ತು ಆರು ತಾಲ್ಲೂಕುಗಳ ತಹಶೀಲ್ದಾರ್ಗಳಿಗೆ ಕರ್ನಾಟಕ ಲೋಕಾಯುಕ್ತ ನೋಟಿಸ್ ನೀಡಿದೆ.
ಕೋಲಾರ (ಡಾ.ನಯನಾ ಎಂ.), ಶ್ರೀನಿವಾಸಪುರ (ಜಿ.ಎನ್.ಸುಧೀಂದ್ರ), ಬಂಗಾರಪೇಟೆ (ವೆಂಕಟೇಶಪ್ಪ ಎನ್.–ಹಿಂದಿನ), ಕೆಜಿಎಫ್ (ಎಚ್.ಜಿ.ಭರತ್), ಮಾಲೂರು (ರೂಪಾ ಎಂ.ವಿ.), ಮುಳಬಾಗಿಲು (ಗೀತಾ ವಿ.) ತಾಲ್ಲೂಕುಗಳ ತಹಶೀಲ್ದಾರ್ಗಳಿಗೆ ಹಾಗೂ ಉಪವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್ ಅವರಿಗೆ ನೋಟಿಸ್ ನೀಡಲಾಗಿದೆ.
ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಪೂರಕ ಸ್ಪಂದನೆ ದೊರೆಯದೆ, ವಿನಾಕಾರಣ ಲೋಕಾಯುಕ್ತ ಹಾಗೂ ವಿವಿಧ ಪ್ರಾಧಿಕಾರಗಳಿಗೆ ಸಂಬಂಧಿಸಿದ ಕುಟುಂಬಸ್ಥರು ಮೊರೆ ಹೋಗುತ್ತಿದ್ದಾರೆ. ಇದು ಲೋಕಾಯುಕ್ತ ಕಾಯ್ದೆಯಡಿ ‘ದುರಾಡಳಿತ’ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಸಂಸ್ಥೆಯಿಂದ ‘ಸ್ವಯಂಪ್ರೇರಿತ ದೂರು’ ದಾಖಲು ಮಾಡಿಕೊಳ್ಳಲಾಗಿದೆ.
ಆರು ತಾಲ್ಲೂಕುಗಳ ತಹಶೀಲ್ದಾರರು ಪೂರಕ ದಾಖಲೆಗಳೊಂದಿಗೆ ಪ್ರತ್ಯೇಕ ವರದಿಯನ್ನು ಸಲ್ಲಿಸಬೇಕಿದೆ. ಹುತಾತ್ಮರಾದ ಮಾಜಿ ಸೈನಿಕರ ಎಷ್ಟು ಜನ ಅವಲಂಬಿತರಿಗೆ ಸರ್ಕಾರದಿಂದ ನಿಯಮಾನುಸಾರ ಪರಿಹಾರ ಮತ್ತು ಸವಲತ್ತು ನೀಡಲಾಗಿದೆ? ಜಮೀನು ಅಥವಾ ನಿವೇಶನಗಳನ್ನು ಎಷ್ಟು ಮಂದಿಗೆ ನೀಡಲಾಗಿದೆ? ಇದುವರೆಗೆ ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ? ಎಷ್ಟು ಅರ್ಜಿಗಳನ್ನು ಪರಿಗಣಿಸಲಾಗಿದೆ? ಹಾಗೂ ಎಷ್ಟು ಅರ್ಜಿಗಳು ಪರಿಗಣನೆಗೆ ಬಾಕಿ ಇವೆ? ಎಂಬ ಬಗ್ಗೆ ಮಾಹಿತಿ ಸಲ್ಲಿಸಬೇಕಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಲಿಂಗಾಪುರ ಗ್ರಾಮದ ಬಿ.ಸಿ.ಗೀತಾ ಅವರ ಪತಿ ಎಲ್.ಬಿ.ಸುಂದರೇಶ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿ ಹುತಾತ್ಮರಾಗಿದ್ದರು. 20 ವರ್ಷಗಳ ಹಿಂದೆ ಶ್ರವಣಹಳ್ಳಿ ಸರ್ವೇ ನಂಬರ್ ಪೈಕಿ 8 ಎಕರೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮವಹಿಸದ ಕಾರಣ ಲೋಕಾಯುಕ್ತ ಸಂಸ್ಥೆಗೆ ಗೀತಾ ದೂರು ನೀಡಿದ್ದರು.
ತುಮಕೂರು ಜಿಲ್ಲೆಯ ಕ್ಯಾತಸಂದ್ರದ ಸಿ.ಎಂ ಬಡಾವಣೆಯ ಎನ್.ಕೆ.ಲಲಿತಾಂಬಿಕ ಅವರ ಪತಿಗೆ ಸ್ವಾತಂತ್ರ್ಯ ಯೋಧರ ಕೋಟಾದಡಿ 1969 ಅ. 6ರಂದು ತುಮಕೂರು ತಾಲ್ಲೂಕಿನ ವಡ್ಡರಹಳ್ಳಿ ಸರ್ವೇ ನಂಬರ್ ಪೈಕಿ 4 ಎಕರೆ ಜಮೀನು ಸರ್ಕಾರಿಂದ ಮಂಜೂರು ಮಾಡಲಾಗಿರುತ್ತದೆ. ಆದರೆ, ಅದು ಕಲ್ಲು ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾಗಿರುವುದಿಲ್ಲ. 50 ವರ್ಷಗಳು ನಿರಂತರವಾಗಿ ಹೋರಾಟ ಮಾಡಿದರೂ ಸರ್ಕಾರದಿಂದ ಮಂಜೂರು ಮಾಡಿರುವುದಿಲ್ಲ. ಅದ್ದರಿಂದ ಪತ್ನಿಯು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು.
ಈ ಪ್ರಕರಣಗಳ ಹಾಗೆ ಕೋಲಾರ ಜಿಲ್ಲೆಯಲ್ಲೂ ನಿವೃತ್ತರಾದ ಯೋಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರ ಅವಲಂಬಿತ ಕುಟುಂಬಗಳಿಗೆ ನಿಯಮಾನುಸಾರ ಸರ್ಕಾರದಿಂದ ದೊರೆಯಬೇಕಾದ ನಿವೇಶನವನ್ನು ನೀಡದೆ ಅಧಿಕಾರಿಗಳು, ಸಿಬ್ಬಂದಿ ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕೂಲಂಕಷ ತನಿಖೆಗಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಲೋಕಾಯುಕ್ತಕ್ಕೆ ದೂರು ನೀಡಿದ್ದ ಗೀತಾ, ಲಲಿತಾಂಬಿಕ ಜಮೀನು ಕಲ್ಪಿಸುವಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ ಸಿಬ್ಬಂದಿಯಿಂದ ಭ್ರಷ್ಟಾಚಾರ, ಕರ್ತವ್ಯಲೋಪ ಆರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.