
ಮಾಲೂರು ನಗರದ ಶಂಕರ ನಾರಾಯಣಸ್ವಾಮಿ ದೇಗುಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು
ಮಾಲೂರು: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಭಾನುವಾರ ಶಿವನ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತರು ಶ್ರದ್ಧಾ ಭಕ್ತಿಯಿಂದ ಇಡೀ ದಿನ ಉಪವಾಸದಿಂದ ಶಿವನಿಗೆ ಪೂಜೆ ಸಲ್ಲಿಸಿ, ಸ್ವಾಮಿಯ ದರ್ಶನ ಪಡೆದರು.
ನಗರದ ದೊಡ್ಡಪೇಟೆ ರಸ್ತೆಯಲ್ಲಿರುವ ಶಂಕರ ನಾರಾಯಣ ಸ್ವಾಮಿ ದೇಗುಲ, ಕುಂಬೇಶ್ವರ ಸ್ವಾಮಿ, ಬೀರೇಶ್ವರ ಸ್ವಾಮಿ, ಬಸವಣ್ಣ ದೇಗುಲ, ಸಂತೇಪೇಟೆ ಪಂಚಲಿಂಗೇಶ್ವರ ಸ್ವಾಮಿ ದೇವಾಲಾಯಗಳಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
ಶಂಕರ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಸಾಲಿಗ್ರಾಮ ಶಿವಲಿಂಗಕ್ಕೆ ಮುಂಜಾನೆಯಿಂದಲೇ ಪೂಜೆ ನಡೆಯಿತು. ಮಧ್ಯರಾತ್ರಿಯಿಂದ ಹಾಲಿನ ಅಭಿಷೇಕ ಆರಂಭಗೊಂಡು ಸೋಮವಾರ ಮುಂಜಾನೆಯವರೆಗೂ ನಡೆಯಿತು. ದೇಗುಲದಲ್ಲಿ ರಾತ್ರಿ ಇಡೀ ಭಜನೆ, ಪಾರಾಯಣ, ಶಿವನಾಮ ಸ್ಮರಣೆ ಹಾಗೂ ನಾದಸ್ವರ ಕಾರ್ಯಕ್ರಮಗಳು ನಡೆದವು.
ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವನಾಮ ಸ್ಮರಣೆ ಮಾಡುತ್ತಾ ಶಿವನ ದರ್ಶನ ಪಡೆದರು.
ತಾಲ್ಲೂಕಿನ ವಿವಿಧೆಡೆ ಶಿವರಾತ್ರಿ: ತಾಲ್ಲೂಕಿನ ಗುಡ್ನಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇಗು, ದೊಡ್ಡ ಶಿವಾರ ಗಂಗಾಧರೇಶ್ವರ ಸ್ವಾಮಿ ದೇಗುಲಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.