ಮಾಲೂರು: ಕೊರೊನಾ ಸೋಂಕು ಹರಡಿರುವ ಪ್ರದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸಲಾಗುತ್ತಿದೆ ಎಂಬ ಕಾರಣಕ್ಕೆ ತಾಲ್ಲೂಕಿನ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಹೋಬೆಲ್ ಕಾರ್ಖಾನೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾದರು.
ಈ ಕಾರ್ಖಾನೆಗಳಲ್ಲಿ ಮೊಟ್ಟೆಗಳಿಂದ ಪುಡಿ ತಯಾರು ಮಾಡಿ, ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಇಲ್ಲಿಗೆ ಮೈಸೂರು ಮತ್ತು ದಾವಣಗೆರೆಯಿಂದ ಮೊಟ್ಟೆಗಳನ್ನು ತರಿಸಲಾಗಿತ್ತು. ಈ ಪ್ರದೇಶಗಳಲ್ಲಿ ಸೋಂಕು ಪತ್ತೆಯಾಗಿದೆ. ಮೊಟ್ಟೆಗಳಿಂದ ನಮಗೂ ಸೋಂಕು ತಗುಲಬಹುದೆಂದು 250 ಕಾರ್ಮಿಕರು ಕೆಲಸ ಬಹಿಷ್ಕರಿಸಿದ್ದಾರೆ.
ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ಆಂಜಿನಪ್ಪ ಭೇಟಿ ನೀಡಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಮಾತುಕತೆ ನಡೆಸಿದರು. ಮೊಟ್ಟೆಗಳಿಂದ ಯಾವುದೇ ಸೋಂಕು ಹರಡುವುದಿಲ್ಲ. ಸೋಂಕಿನ ಭೀತಿ ಇದ್ದರೆ ಕೆಲಸಕ್ಕೆ ಬರಬೇಡಿ ಎಂದರು.
ಒಂದು ವೇಳೆ ಸೋಂಕು ತಗುಲಿದರೆ, ಸಂಪೂರ್ಣ ಜವಾಬ್ದಾರಿಯನ್ನು ಕಾರ್ಖಾನೆಯ ಆಡಳಿತ ಮಂಡಳಿ ಹೊರಲು ಸಿದ್ಧವಾದರೆ, ನಾವು ಕೆಲಸಕ್ಕೆ ಹಾಜರಾಗುತ್ತೇವೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ರಘುನಾಥ್
ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.