ಮಾಲೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ಮಾಸ್ತಿ ಗ್ರಾಮದಿಂದ ಗುಜರಾತ್ನ ಸೂರತ್ನಲ್ಲಿ ನಡೆದ ಜಮಾತ್ ಸಮಾವೇಶಕ್ಕೆ ತೆರಳಿದ್ದ 44 ಯಾತ್ರಾರ್ಥಿಗಳನ್ನು ಬರಮಾಡಿಕೊಂಡ ಜಿಲ್ಲಾಡಳಿತ ಭಾನುವಾರ ಮುಂಜಾನೆ ಆರೋಗ್ಯ ತಪಾಸಣೆ ನಡೆಸಿ 28 ದಿನ ಕ್ವಾರಂಟೇನ್ಗೆ ಒಳಪಡಿಸಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಮಾಸ್ತಿ ಗ್ರಾಮದಿಂದ ಲಾಕ್ಡೌನ್ ಆದೇಶಕ್ಕೂ ಮುನ್ನ, ಗುಜರಾತ್ನ ಸೂರತ್ನಲ್ಲಿ ನಡೆದ ಜಮಾತ್ ಸಮಾವೇಶಕ್ಕೆ 44 ಮುಸ್ಲಿಂ ಯಾತ್ರಾರ್ಥಿಗಳು ತೆರಳಿದ್ದರು. ಲಾಕ್ಡೌನ್ ಆದೇಶದಿಂದ ಸೂರತ್ನಲ್ಲೇ ಸಿಲುಕಿಕೊಂಡಿದ್ದರು.
ಕೇಂದ್ರ ಸರ್ಕಾರದ ಆದೇಶದಂತೆ ಅಲ್ಲಿನ ಸರ್ಕಾರ ಆರೋಗ್ಯ ತಪಾಸಣೆ ನಡೆಸಿ ಬಸ್ಗಳ ಮೂಲಕ ಸ್ವಗ್ರಾಮಗಳಿಗೆ ತೆರಳಲು ಅವಕಾಶ ಕಲ್ಪಿಸಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿಗೆ ಬಂದ ಯಾತ್ರಾರ್ಥಿಗಳನ್ನು ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ ಉಸ್ತುವಾರಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ಬಸ್ಗಳ ಮೂಲಕ ತಾಲ್ಲೂಕಿನ ರಾಜೇನಹಳ್ಳಿಯ ಗ್ರಾಮದ ಸಮೀಪ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಕರೆದೊಯ್ದು ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಗಂಟಲು ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 44 ಮಂದಿಯನ್ನು ಮೊದಲ ಹಂತದಲ್ಲಿ 14 ದಿನ ಕ್ವಾರಂಟೇನ್ನಲ್ಲಿ ಇಡಲಾಗಿದೆ.
ತಾಲ್ಲೂಕು ಆಡಳಿತ ನಿತ್ಯ ಆರೋಗ್ಯ ತಪಾಸಣೆ, ಊಟ, ಇನ್ನಿತರೆ ಸೌಲತ್ತುಗಳನ್ನು ಒದಗಿಸಲಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.