ಕೋಲಾರ: ‘ರಾಜ್ಯದ ಗಡಿ ಭಾಗವಾದ ಮುಳಬಾಗಿಲು ತಾಲ್ಲೂಕಿನ ಎನ್.ವೆಂಕಟಾಪುರ ಗ್ರಾಮದಲ್ಲಿ ಜನಿಸಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಹರಿವು’ ಸಿನಿಮಾ ಮಾಡಿದ್ದು ಹೆಮ್ಮೆಯ ವಿಚಾರ. ಜತೆಗೆ ಈ ಸಿನಿಮಾವನ್ನು ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರದರ್ಶನ ಮಾಡಿ ಸಂವಾದ ಏರ್ಪಡಿಸಿರುವುದು ಸಂತಸದ ವಿಚಾರ’ ಎಂದು ನಿರ್ದೇಶಕ ಮನ್ಸೂರೆ ಮಂಜುನಾಥ್ ಹೇಳಿದರು.
ಸಮುದಾಯ ತಂಡವು ನಗರದ ಎಸ್ಡಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಹರಿವು’ ಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಮಾತನಾಡಿ, ‘ಒಂದೂವರೆ ತಾಸಿನ ಸಿನಿಮಾ ಆಧುನಿಕ ಭಾರತ ಒತ್ತಡದ ಬದುಕನ್ನು ಅನಾವರಣಗೊಳಿಸುತ್ತದೆ’ ಎಂದರು.
‘ಮನ್ಸೂರೆ ಮಂಜುನಾಥ್ ನೈಜ ಕಥೆಯನ್ನು ಬಹಳ ಮನೋಜ್ಞವಾಗಿ ಸಿನಿಮಾ ಮಾಡಿ ಪ್ರೇಕ್ಷಕನ ಮೇಲೆ ಪ್ರಭಾವ ಬೀರುವಂತೆ ಮಾಡಿದ್ದಾರೆ. ಬಾಂಧವ್ಯಗಳನ್ನು ಬೆಸೆಯುವುದು ಹೇಗೆ ಚಿತ್ರದಲ್ಲಿ ಹೇಳಲಾಗಿದೆ’ ಎಂದು ಸಮುದಾಯ ತಂಡದ ಅಚ್ಯುತ ಅಭಿಪ್ರಾಯಪಟ್ಟರು.
‘ಸಿನಿಮಾ ನೋಡುವ ಮೂಲಕ ಅದರ ಪ್ರಭಾವಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ಸಮಾಜಕ್ಕೆ ಪೂರಕವಾಗಿ ಆಲೋಚನೆ ಮಾಡುವುದು ಬಹಳ ಮುಖ್ಯ. ಸಿನಿಮಾ, ನಾಟಕ, ಹಾಡು ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.
ಸಮುದಾಯ ತಂಡದ ಕೋಲಾರ ಘಟಕದ ಅಧ್ಯಕ್ಷ ಶಶಿಕುಮಾರ್, ಸದಸ್ಯ ಮಂಜುನಾಥ್ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.