ADVERTISEMENT

ಬುದ್ಧನ ಹಾದಿಯಲ್ಲಿ ಮನುಕುಲ ಸಾಗಲಿ

​ಪ್ರಜಾವಾಣಿ ವಾರ್ತೆ
Published 16 ಮೇ 2022, 15:51 IST
Last Updated 16 ಮೇ 2022, 15:51 IST
ಕೋಲಾರದಲ್ಲಿ ಸೋಮವಾರ ನಡೆದ ಬುದ್ಧ ಜಯಂತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿದರು
ಕೋಲಾರದಲ್ಲಿ ಸೋಮವಾರ ನಡೆದ ಬುದ್ಧ ಜಯಂತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿದರು   

ಕೋಲಾರ: ‘ಗೌತಮ ಬುದ್ಧನ ಆಚಾರ, ವಿಚಾರಗಳು ದೇಶಕ್ಕೆ ಮಾತ್ರ ಸೀಮಿತವಲ್ಲ. ಇಡೀ ವಿಶ್ವಕ್ಕೆ ಸಲ್ಲುವ ಸಂದೇಶಗಳಾಗಿದ್ದು, ಮನುಕುಲ ಅವರ ದಾರಿಯಲ್ಲಿ ಸಾಗಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕಿವಿಮಾತು ಹೇಳಿದರು.

ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹಾಗೂ ಭಗವಾನ್ ಬುದ್ಧ ಧರ್ಮ ಪ್ರಚಾರ ಸಮಿತಿ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿಯಲ್ಲಿ ಮಾತನಾಡಿ, ‘ಬುದ್ಧ ರಾಜಮನೆತನದಲ್ಲಿ ಜನಿಸಿದರೂ ಅರಮನೆಯಿಂದ ಹೊರ ಹೋದಾಗ ಸಮಾಜದ ನಡುವೆ ನಡೆಯುತ್ತಿದ್ದ. ಬಡವರುಹಾಗೂ ಅಸಹಾಯಕ ಸ್ಥಿತಿಯಲ್ಲಿರುವ ಜನರ ಕಷ್ಟ ಅರಿತು ಶಾಂತಿ ಸಹಬಾಳ್ವೆಯಿಂದ ಬದುಕಲು ಧ್ಯಾನದ ಮೂಲಕ ಜ್ಞಾನ ಪ್ರಚಾರ ಮಾಡಿದರು’ ಎಂದರು.

‘ದೇಶದ ಬಿಹಾರದಲ್ಲಿ ವಿಹಾರವಾಗಿ ಶಾಂತಿ ನೆಲೆಸಲು ಜಗತ್ತಿನೆಲ್ಲೆಡೆ ಬುದ್ಧನ ಸಂದೇಶ ರವಾನಿಸಲಾಗಿದೆ. ಮನುಷ್ಯ ನೆಮ್ಮದಿಯಾಗಿರಲು ಬುದ್ಧನ ಸಂದೇಶಗಳನ್ನು ಜೀವನದಲ್ಲಿ ಪಾಲಿಸಬೇಕು. ದೇಶದ ಸಂವಿಧಾನದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್‌ರ ತತ್ವಾದರ್ಶ ಅಡಕವಾಗಿವೆ. ಬುದ್ಧನ ತತ್ವಾದರ್ಶವು ಸಮಾಜಕ್ಕೆ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಶಾಂತಿಯ ಸಂಕೇತವಾಗಿ ಬುದ್ಧನ ವಿಚಾರಗಳು ಪ್ರಸ್ತುತವಾಗಿವೆ. ಪ್ರತಿ ಮನುಷ್ಯ ಗುರುವಿಗೆ ಗೌರವ ನೀಡುವ ಮೂಲಕ ಸಮಾಜವನ್ನು ಶಾಂತಿಯ ದೇಶವಾಗಿ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ ಆಶಿಸಿದರು.

‘ಸುಮಾರು 2,500 ವರ್ಷಗಳ ಇತಿಹಾಸವಿರುವ ವ್ಯಕ್ತಿಯನ್ನು ಸ್ಮರಿಸುತ್ತಿದ್ದೇವೆ. ಬುದ್ಧ, ಬಸವಣ್ಣ, ಅಂಬೇಡ್ಕರ್‌ರ ಹಾದಿಯಲ್ಲಿ ಸಮಾಜ ನಡೆಯಬೇಕಿದೆ. ಪ್ರತಿ ಮನುಷ್ಯನಲ್ಲಿ ದೇವರಿದ್ದು, ಮೇಲು ಕೀಳು ಭಾವನೆ ಹೋಗಲಾಡಿಸಿ ಮನುಷ್ಯತ್ವದಲ್ಲಿ ಬದುಕುವಂತಾಗಬೇಕು’ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ದಲಿತ ಮುಖಂಡರಾದ ಪಂಡಿತ್‌ ಮುನಿವೆಂಕಟಪ್ಪ, ನಾಗನಾಳ ಮುನಿಯಪ್ಪ, ಸುಬ್ಬರಾಯಪ್ಪ, ಟಿ.ವಿಜಿಕುಮಾರ್‌, ವೆಂಕಟಾಚಲಪತಿ, ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.