ಮುಳಬಾಗಿಲು: ‘ತಾಲ್ಲೂಕಿನಾದ್ಯಂತ ಸುಮಾರು ಒಂದು ಸಾವಿರ ಎಕರೆಯಷ್ಟು ಅರಣ್ಯ ಮತ್ತಿತ್ತರ ಭೂಮಿ ಒತ್ತುವರಿಯಾಗಿರಬಹುದು. ಅಲ್ಲದೆ, ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ತಿಳಿಸಿದರು.
ನಗರದ ಹೊರವಲಯದ ಸೊನ್ನವಾಡಿ ಬಳಿ ವಾಸವಿ ಮಹಲ್ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪರಿಸರ ಸಂರಕ್ಷಣಾ ಸೇವಾ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿದತ್ತವಾದ ಸಾರ್ವಜನಿಕ ಆಸ್ತಿಗಳು ಹಾಗೂ ವನ್ಯ ಜೀವಿಗಳನ್ನು ನಾಶಮಾಡದೆ, ಒತ್ತುವರಿ ಮಾಡಿಕೊಳ್ಳದೆ ಸಂರಕ್ಷಿಸಿ, ಉಳಿಸಿ ಬೆಳಸಿದಾಗ ಪರಿಸರ ಉಳಿಸಬಹುದು. ಪರಿಸರ ಸಂರಕ್ಷಣೆಯಿಂದ ಮಾತ್ರವೇ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನೀಡಲು ಸಾಧ್ಯ. ನಮ್ಮ ಜನರು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ತಮ್ಮ ಸುತ್ತಮುತ್ತ ಗಿಡ, ಮರ ನೆಡಬೇಕು. ನೀರು ಹರಿಯುವ ರಾಜ ಕಾಲುವೆ, ನಾಲೆ ಮತ್ತು ಇನ್ನಿತರ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು. ಅರಣ್ಯ ಪ್ರದೇಶ ಉಳಿಸಿ ಬೆಳೆಸುವ ಕಾರ್ಯದಲ್ಲೂ ಎಲ್ಲರೂ ಸಕ್ರಿಯರಾಗಬೇಕಿದೆ. ಅರಣ್ಯ ಭೂಮಿಯನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ, ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಉಪ ನೋಂದಣಾಧಿಕಾರಿ ಮಂಜುಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಿ.ಮುನಿವೆಂಕಟಪ್ಪ, ಶಾರದ ಕಾಲೇಜು ಪ್ರಾಂಶುಪಾಲ ಜೈಪ್ರಕಾಶ್, ನಿವೃತ್ತ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಮೂರ್ತಿ, ನಗರಸಭೆ ಅಧ್ಯಕ್ಷೆ ಶಭಾನಾ ಬೇಗಂ ಅಮಾನುಲ್ಲಾ, ಮೆಕಾನಿಕ್ ಶ್ರೀನಿವಾಸ್, ಶ್ರೀನಾಥ್, ಜಿ.ರಮೇಶ್ ಕುಮಾರ್, ಗಣೇಶಪಾಳ್ಯ ಕಿಟ್ಟ, ಹುಸೇನ್, ಕೀಲುಹೊಳಲಿ ಹರೀಶ್, ರಂಜಿತ್, ಸುರೇಶ್, ಶ್ರೀನಿವಾಸ್ ಬಾಬು, ಮುಸ್ತಫಾ, ಗ್ಯಾಸ್ ರಘು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.