ಸಾವು (ಪ್ರಾತಿನಿಧಿಕ ಚಿತ್ರ)
ಮುಳಬಾಗಿಲು: ತಾಲ್ಲೂಕಿನ ಯಳಚೇಪಲ್ಲಿ ಗ್ರಾಮದ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಸಂಬಂಧ ಡೆತ್ ನೋಟ್ ಸಿಕ್ಕಿದ್ದು, ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಅ.2ರಂದು ನಾಪತ್ತೆಯಾಗಿದ್ದ ಗ್ರಾಮದ ಧನ್ಯಾ ಬಾಯಿ (13) ಹಾಗೂ ಚೈತ್ರಾ ಬಾಯಿ (13) ಅವರ ದೇಹ ಅ.4ರಂದು 2 ಕಿ.ಮೀ ದೂರವಿರುವ ಕುಪ್ಪಂಪಾಳ್ಯ ಬಳಿ ತೋಟದ ಬಾವಿಯಲ್ಲಿ ತೇಲುತಿತ್ತು.
ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಕುಟುಂಬಸ್ಥರು ಕೊಲೆ ಮಾಡಿ ಬಿಸಾಡಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು.
ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಧನ್ಯಾ ಬಾಯಿ ಶಾಲಾ ಬ್ಯಾಗಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ‘ನನಗೆ ಬದುಕಲು ಇಷ್ಟ ಇಲ್ಲ, ಸಾಯಬೇಕು. ನಾನು ಸತ್ತ ಮೇಲೆ ತುಂಬಾ ಸಂತೋಷ ಬಾಯ್ ಬಾಯ್. ನಿಮ್ಮನೆಲ್ಲರನ್ನೂ ಸಂತೋಷವಾಗೇ ಇಡುತ್ತೀನಿ, ಬಾಯ್ ಬಾಯ್....ಹಾ ಹಾ ಹಾ’ ಎಂದು ನೋಟ್ ಬುಕ್ನ ಹಾಳೆಯೊಂದರಲ್ಲಿ ಬರೆದಿಟ್ಟಿರುವುದು ಗೊತ್ತಾಗಿದೆ.
ಧನ್ಯಾ ಬಾಯಿ ತನ್ನ ಗೆಳತಿ ಚೈತ್ರಾ ಬಾಯಿ ಅವರನ್ನೂ ಕರೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮೃತ ಚೈತ್ರಾ ಬಾಯಿಗೆ ತಾಯಿ ಇರಲಿಲ್ಲ. ತಂದೆ ಈಶ್ವರಾವ್ ಎರಡನೇ ಮದುವೆ ಮಾಡಿಕೊಂಡಿದ್ದರು. ಧನ್ಯಾ ಬಾಯಿಗೆ ಪೋಷಕರಿರಲಿಲ್ಲ. ರಾಘವೇಂದ್ರ ರಾವ್ ಎಂಬ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.
‘ತೋಟದ ಬಳಿ ಇಬ್ಬರು ಬಾಲಕಿಯರ ಚಪ್ಪಲಿ ಸಿಕ್ಕಿವೆ. ಅಲ್ಲಿಯೇ ಕುಳಿತು ಚರ್ಚಿಸಿ ನಂತರ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಕುಟುಂಬದವರು ಈ ಬಾಲಕಿಯರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ, ಜೀವನದಲ್ಲಿ ಮನನೊಂದು ಮೃತಪಟ್ಟಿರಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.
ಬಾಲಕಿಯರ ಶವ ಪತ್ತೆಯಾದ ದಿನ ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಎ.ಎಸ್.ಪಿ ಮನಿಷಾ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಅರುಣ್ ಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.