
ಮುಳಬಾಗಿಲು: ನಗರದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಮತ್ತು ಬೀದಿ ದೀಪಗಳ ಕಾಮಗಾರಿ ಮುಗಿದು ತಿಂಗಳುಗಳೇ ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ. ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಲೋಕಾರ್ಪಣೆಗೊಳಿಸಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ ಒತ್ತಾಯಿಸಿದರು.
ವೇದಿಕೆಯ ಪದಾಧಿಕಾರಿಗಳು ನಗರದ ಎಪಿಎಂಸಿ ಕಾರ್ಯದರ್ಶಿ ಹಂಸಕಳ ಅವರಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಹುಸೇನ್ ಮಾತನಾಡಿ, ಪ್ರತಿದಿನ ಮುಂಜಾನೆ ಸಾವಿರಾರು ಮಂದಿ ರೈತರು ಮಾರುಕಟ್ಟೆಗೆ ತರಕಾರಿ ತರುತ್ತಾರೆ. ಆ ವೇಳೆ ಕತ್ತಲಲ್ಲಿ ಓಡಾಡುವಂತಾಗಿದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಮಾರುಕಟ್ಟೆಯಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪಗಳನ್ನು ಲೋಕಾರ್ಪಣೆಗೊಳಿಸಬೇಕು ಎಂದರು.
ಎಪಿಎಂಸಿ ಆವರಣದಲ್ಲಿ ಕಸದ ತ್ಯಾಜ್ಯ ಹಾಗೂ ನಾನಾ ಬಗೆಯ ಗಿಡಗಂಟೆಗಳು ಬೆಳೆದಿದ್ದು, ಇದರಿಂದ ವಿಷಜಂತು ಹಾಗೂ ನಾಯಿಗಳ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಓಡಾಟ ಕಷ್ಟವಾಗಿದೆ. ಹಾಗಾಗಿ ಮಾರುಕಟ್ಟೆ ಮುಂಭಾಗದಲ್ಲಿರುವ ಹೈಮಾಸ್ಟ್ ದೀಪ ಮತ್ತು ಬೀದಿ ದೀಪಗಳಿಗೆ ಚಾಲನೆ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಎಪಿಎಂಸಿ ಕಾರ್ಯದರ್ಶಿ ಹಂಸಕಳ ಮಾತನಾಡಿ, ಕೂಡಲೇ ಶಾಸಕರು ಮತ್ತು ನಗರಸಭೆ ಅಧಿಕಾರಿಗಳ ಗಮನ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಕರವೇ ಅಧ್ಯಕ್ಷ ಹುಸೇನ್, ಬಾಲಾಜಿ, ಮಂಜುನಾಥ್, ನಯಾಜ್, ನವೀದ್, ಪಿ.ಜಿ.ಮಣಿ, ಶಿವಣ್ಣ, ಬಾಬು, ಅಂಬರೀಶ್, ಹಿದಾಯತ್, ಜಾಕೀರ್, ಬಾಬು, ರಘು, ಶಫೀ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.