ADVERTISEMENT

ಈ ಊರಲ್ಲಿ ಪರಿಶಿಷ್ಟರು ಯುಗಾದಿ ಮಾಡಲ್ಲ, ಯಾಕೆ ಗೊತ್ತೆ?

ಕುರುಡುಮಲೆ ಗ್ರಾಮದಲ್ಲಿ ಇನ್ನೂ ಜೀವಂತವಾಗಿದೆ ಭಿನ್ನ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST
ಮನೆಯ ಗೋಡೆಗೆ ಸಗಣಿಯಿಂದ ಪಟ್ಟಿ ಎಳೆಯುತ್ತಿರುವುದು
ಮನೆಯ ಗೋಡೆಗೆ ಸಗಣಿಯಿಂದ ಪಟ್ಟಿ ಎಳೆಯುತ್ತಿರುವುದು   

ಮುಳಬಾಗಿಲು: ಸಂಪ್ರದಾಯದಂತೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಬೇವು-ಬೆಲ್ಲ ಸವಿದು ಹಾಗೂ ಹೊಸಬಟ್ಟೆ ತೊಟ್ಟು ಸಡಗರದಿಂದ ಆಚರಿಸುವುದು ರೂಢಿ. ಆದರೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ ಕೆಲವು ದಲಿತ ಕುಟುಂಬಗಳು ಹಬ್ಬ ಆಚರಣೆ ಮಾಡದೆ ಇರುವುದು ವಿಶೇಷ.

ಹಿಂದೆ ಯಾವುದೊ ಕಾರಣಕ್ಕಾಗಿ ಪೂರ್ವಿಕರು ಯುಗಾದಿ ಹಬ್ಬವನ್ನು ಸ್ವಯಂ ಪ್ರೇರಿತವಾಗಿ ಆಚರಣೆ ಮಾಡಿಲ್ಲ, ಆ ಸಂಪ್ರದಾಯ ಹಾಗೇ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮದ ಎಪ್ಪತ್ತು ವರ್ಷದ ವೆಂಕಟಪ್ಪ, ಅವರ ಪ್ರಕಾರ, ಪರಿಶಿಷ್ಟ ಜಾತಿಯ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಹಬ್ಬ ಆಚರಿಸುವುದಿಲ್ಲ. ಬೇರೆ ಕಡೆಯಿಂದ ವಲಸೆ ಬಂದು ನೆಲೆನಿಂತವರು ಆಚರಿಸುತ್ತಾರೆ.

ಸುಮಾರು ವರ್ಷಗಳ ಹಿಂದೆ ಯುಗಾದಿ ಹಬ್ಬದಂದು ಗೂಳಿಯೊಂದು ಬೆಟ್ಟದ ತಪ್ಪಲಿನಲ್ಲಿ ಕುಡಿಯಲು ನೀರು ತರಲು ಹೋದ ದಲಿತ ಸಮುದಾಯದ ಗರ್ಭಿಣಿ ಮೇಲೆ ದಾಳಿ ಮಾಡಿತಂತೆ. ಮಹಿಳೆ ದಾಳಿಯಿಂದ ಮೃತಪಟ್ಟ, ಕೆಲ ಹೊತ್ತಿನಲ್ಲಿಯೇ ಆ ಗೂಳಿ ಕೂಡ ಇದ್ದಕ್ಕಿದಂತೆ ಸಾವಿಗೀಡಾಯಿತಂತೆ. ಈ ಹಿನ್ನಲೆಯಲ್ಲಿ ಹಬ್ಬವನ್ನು ಆಚರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದ ವೆಂಕಟೇಶಯ್ಯ.

ADVERTISEMENT

ಗರ್ಭಿಣಿ ಮೃತಪಟ್ಟ ಮರುವರ್ಷ ಪರಿಶಿಷ್ಟ ಜಾತಿಯ ಕುಟುಂಬದವರು ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದರಂತೆ. ಇದ್ದಕ್ಕಿದಂತೆ ಕೆಲವು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಬಟ್ಟೆ, ದವಸ, ಧಾನ್ಯ, ಗುಡಿಸಲು ಸುಟ್ಟು ಹೋದವಂತೆ.
ಭಯಭೀತರಾದ ಆ ಕುಟುಂಬದವರೂ ಹಾಗೂ ಅವರ ಹತ್ತಿರ
ಸಂಬಂಧಿಗಳು ಹಬ್ಬವನ್ನು ಆಚರಿಸುವುದು ಬಿಟ್ಟರು ಎಂಬ ಹಿನ್ನಲೆಯಿದೆ ಎನ್ನುತ್ತಾರೆ ದಲಿತ ಕುಟುಂಬ ಸದಸ್ಯರು.

ಹಬ್ಬಕ್ಕೂ ಮುಂಚೆ ಮನೆಗೆ ಸಗಣಿಯಿಂದ ಪಟ್ಟಿ ಎಳೆಯುವುದರ ಮೂಲಕ ಹಬ್ಬವನ್ನು ಆಚರಿಸುವುದಿಲ್ಲ ಎಂಬುದನ್ನು ಸೂಚಿಸಲಾಗುತ್ತದೆ. ಆದರೆ ರಾಮನವಮಿ ದಿವಸದಂದು ಯುಗಾದಿ ಹಬ್ಬವನ್ನು ಆದರಿಸಲಾಗುತ್ತದೆ. ಹೀಗೆ ಸುಮಾರು ಇನ್ನೂರು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಹಿಂದಿನ ಹಲವಾರು ಕಠಿಣವಾದ ಕಟ್ಟುಪಾಡುಗಳನ್ನು ಬದಲಾಯಿಸಿಕೊಳ್ಳಲಾಗಿದೆ ಎನ್ನುತ್ತಾರೆ ಮುನಿಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.