ಕೋಲಾರ: ತಾಲ್ಲೂಕಿನ ಎಂ.ಮಲ್ಲಾಂಡಹಳ್ಳಿ ಗ್ರಾಮದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಗೋಪಾಲ್ (40) ಎಂಬುವರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಅದೇ ಗ್ರಾಮದ ನಾಗೇಶ್ (35) ಎಂಬಾತ ಈ ದುಷ್ಕೃತ್ಯ ಎಸಗಿದ್ದು, ವೇಮಗಲ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿವಾಹಿತರಾಗಿದ್ದ ಗೋಪಾಲ್ ಕೂಲಿ ಕೆಲಸ ಮಾಡುತ್ತಿದ್ದರು.
ಸ್ನೇಹಿತರಾದ ನಾಗೇಶ್ ಮತ್ತು ಗೋಪಾಲ್ ಶುಕ್ರವಾರ ರಾತ್ರಿ ಪಾನಮತ್ತರಾಗಿ ಮದ್ಯದ ನಶೆಯಲ್ಲಿ ಜಗಳವಾಡಿದ್ದರು. ನಂತರ ಗ್ರಾಮಸ್ಥರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದರು. ಗೋಪಾಲ್ ಕುಟುಂಬ ಸದಸ್ಯರೊಂದಿಗೆ ಊಟ ಮಾಡಿದ ನಂತರ ಮನೆಯ ಮುಂದಿನ ಜಗಲಿಯಲ್ಲಿ ಮಲಗಿದ್ದರು. ನಾಗೇಶ್, ಮಧ್ಯ ರಾತ್ರಿ ಗೋಪಾಲ್ರ ಮನೆ ಬಳಿ ಬಂದು ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗೇಶ್ ಈ ಹಿಂದೆ ಗ್ರಾಮದ ನಾರಾಯಣಪ್ಪ ಎಂಬುವರನ್ನು ಕೊಲೆ ಮಾಡಿ 5 ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ. ಗೋಪಾಲ್ ಅವರನ್ನು ಕೊಲೆ ಮಾಡಿದ ನಂತರ ಪರಾರಿಯಾಗಿದ್ದ ಆತನನ್ನು ಕ್ಯಾಲನೂರು ಬಳಿ ಶನಿವಾರ ಸಂಜೆ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.