ADVERTISEMENT

ಕೋಲಾರ | ನಸೀರ್‌ ಟೀಕಿಸಿದ್ದಕ್ಕೆ ರವಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:47 IST
Last Updated 8 ಫೆಬ್ರುವರಿ 2026, 4:47 IST
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿದರು
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿದರು    

ಕೋಲಾರ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಆರ್‌ಎಸ್‌ಎಸ್‌ನ 10 ಮಂದಿ ಹೆಸರನ್ನು ಫೆ.17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕರೆದಿರುವ ಬಹಿರಂಗ ಸಭೆಯಲ್ಲಿ ಹೇಳಲಿ ಎಂದು ಕಾಂಗ್ರೆಸ್‌ ನಾಯಕರು, ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಅವರನ್ನು ಟೀಕಿಸಿದ್ದಾರೆಂದು ಆರೋಪಿಸಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ನ ಎಸ್‌ಟಿ ಘಟಕದ ಅಧ್ಯಕ್ಷ ಎನ್.ಅಂಬರೀಷ್, ‘ಆರ್‌ಎಸ್ಎಸ್‌ ಸಂಘಟನೆಯಿಂದ ದೇಶದಲ್ಲಿ ಸದಾ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸವಾಗುತ್ತಿದೆ. ಧರ್ಮಧರ್ಮಗಳ ನಡುವೆ ಅಸಹಿಷ್ಣುತೆ ಹುಟ್ಟಿ ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

ಇಂಥ ಸಂಘಟನೆಯ ದೇಶಭಕ್ತಿ ನೋಡಿ ಬಿಜೆಪಿ ಸೇರಿರುವ ಸಿ.ಟಿ.ರವಿ ಸದನದಲ್ಲಿ ಸದಾ ವಿವಾದಗಳನ್ನು ಮಾಡುತ್ತಿರುತ್ತಾರೆ. ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದರು. ಇದೀಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದರು.

ADVERTISEMENT

ಏನಾದರೂ ಪ್ರಶ್ನೆ ಇದ್ದರೆ ನೇರವಾಗಿ ಕೇಳಲಿ. ಅದನ್ನು ಬಿಟ್ಟು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಆರ್‌ಎಸ್‌ಎಸ್ ನೋಡಿ ಬೆಳೆದಿರುವ ಸಿ.ಟಿ.ರವಿ ಅವರಿಗೂ ಗಾಂಧಿ ತತ್ವ ನೋಡಿ ಬೆಳೆದಿರುವ ನಸೀರ್ ಅವರಿಗೂ ಸಾಕಷ್ಟು ವ್ಯತ್ಯಾಸವಿದೆ. ಪ್ರಧಾನಿ ಬಗ್ಗೆ ಅಚಾತುರ್ಯವಾಗಿ ಮಾತನಾಡಿದ್ದಕ್ಕೆ ನಸೀರ್ ಅಹಮದ್ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ರವಿ ಕ್ಷಮೆಯಾಚಿಸಿಲ್ಲ. ಸಂಘದ ಬಗ್ಗೆ ಬೇಸರದಿಂದ ಹೊರ ಬಂದ ಎ.ಕೆ.ಸುಬ್ಬಯ್ಯ ಅವರಂತೆ ರವಿ ಕೂಡ ಹೊರಬರುತ್ತಾರೆ ಎಂದು ಹೇಳಿದರು.

ಮುಖಂಡ ಅನ್ವರ್ ಪಾಷ ಮಾತನಾಡಿ, ‘ಸದನದಲ್ಲಿ ಎಂಎಲ್ಸಿ ನಸೀರ್ ಅಹಮದ್ ಮಾತನಾಡಿದಾಗ ಸಿ.ಟಿ.ರವಿ ಕಾಲು ಕೆರೆದುಕೊಂಡು ಜಗಳ ಮಾಡಿದ್ದಲ್ಲದೆ, ಮುಸ್ಲಿಂ ಸಮುದಾಯ ಗುರಿ ಮಾಡಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ದೇಶಭಕ್ತಿ ಹೆಸರಲ್ಲಿ ಬೂಟಾಟಿಕೆ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮರ ವಿಚಾರ ಬಿಟ್ಟರೆ ದೇಶದ ಅಭಿವೃದ್ಧಿಯ ಕಾಳಜಿ ಇಲ್ಲ’ ಎಂದು ಕಿಡಿಕಾರಿದರು.

ನಸೀರ್‌ ಕೋಲಾರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ಮಾಜಿ ಸಂಸದ ಮುನಿಸ್ವಾಮಿ ಬಾಯಿಗೆ ಬಂದಂತೆ ಮಾತನಾಡಿ, ನಸೀರ್‌ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖಂಡ ಚಂದ್ರಮೌಳಿ ಮಾತನಾಡಿ, ‘ಮಾಜಿ ಸಂಸದ ಎಸ್.ಮುನಿಸ್ವಾಮಿ ಅಂಥವರು ಒಬ್ಬರಲ್ಲ; 10 ನಾಯಕರು ಬಂದರೂ ನಸೀರ್ ಅಹಮದ್ ನೆರಳನ್ನು ತಾಕಲು ಆಗಲ್ಲ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇನ್ನಾದರೂ ಬಿಡಲಿ. ಆಡು ಬೆಳೆದರೆ ಆನೆ ಆಗಲ್ಲ. ತಾಕತ್ತು ದಮ್ಮು ಇದ್ದರೆ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿದರು. ‘ಕುಡಾ’ ಅಧ್ಯಕ್ಷ ಮಹಮ್ಮದ್ ಹನೀಫ್, ನಗರಸಭೆ ಮಾಜಿ ಅಧ್ಯಕ್ಷ ಅಫ್ರೋಜ್ ಪಾಷ, ಹಿರಿಯ ಮುಖಂಡರಾದ ಶ್ರೀಕೃಷ್ಣ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕಠಾರಿಪಾಳ್ಯ ನರೇಂದ್ರ ಬಾಬು(ಗಂಗಣ್ಣ), ಸಲ್ಲಾವುದ್ದೀನ್ ಬಾಬು, ಖಾದ್ರಿಪುರ ಬಾಬು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆಫ್ರೀದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ರಾಯ್ ಇದ್ದರು.

‘ದೇಶಕ್ಕೆ ಸಂಘದ ಕೊಡುಗೆ ಏನು?’

‘ಆರ್‌ಎಸ್‌ಎಸ್ ದೇಶಭಕ್ತಿ ನೋಡಿ ಬಿಜೆಪಿಗೆ ಸೇರಿರುವುದಾಗಿ ಸಿ.ಟಿ.ರವಿ ಹೇಳುದ್ದಾರೆ. ಬಿಜೆಪಿಯದ್ದು ಯಾವ ದೇಶಭಕ್ತಿ? ದೇಶಕ್ಕೆ ಆರ್‍ಎಸ್‍ಎಸ್ ಕೊಡುಗೆ ಏನು? ಅಮಿತ್ ಶಾ ಈ ಹಿಂದೆ ವಿವಾದಾತ್ಮಕವಾಗಿ ಮಾತನಾಡಿದಾಗ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ಶೂ ಎಸೆದಾಗ ಏಕೆ ಮಾತನಾಡಲಿಲ್ಲ. ದೇಶ ಭಕ್ತಿ ಹೆಸರಿನಲ್ಲಿ ಬೂಟಾಟಿಕೆ ಮಾಡುತ್ತೀರಾ’ ಎಂದು ಮುಖಂಡ ಅನ್ವರ್ ಪಾಷ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.