ಮುಳಬಾಗಿಲು: ನಗರದ ಕೆಜಿಎಫ್ ರಸ್ತೆಯಲ್ಲಿರುವ ನಗರ ಪೊಲೀಸ್ ಠಾಣೆ ಮುಂಭಾಗ ಹಾಗೂ ಸರ್ಕಾರಿ ಆಸ್ಪತ್ರೆಗೆ ಕೂಗಳತೆ ದೂರದಲ್ಲಿ ಇರುವ ಮುಖ್ಯ ರಸ್ತೆಯಲ್ಲಿ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಿಸಿಲು, ಮಳೆ–ಗಾಳಿ ಎನ್ನದೆ ಛಾಪೆ ಹಾಕಿಕೊಂಡು ಮಲಗುವ ದೃಶ್ಯ ಪ್ರತಿದಿನ ಕಾಣ ಸಿಗುತ್ತದೆ.
ರಸ್ತೆ ಬದಿಯಲ್ಲೇ ಮಲಗುವುದರಿಂದ ಅಪಘಾತವಾಗುವ ಸಂಭವವಿದೆ. ಸಂಬಂಧಿಗಳು ಯಾರು ಕೂಡ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಕನಿಕರ ವ್ಯಕ್ತಪಡಿಸಿದ್ದಾರೆ.
ನಗರ ಠಾಣೆ ಇನ್ ಸ್ಪೆಕ್ಟರ್ ಶಿವಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ‘ರಸ್ತೆಯಲ್ಲಿ ಮಲಗುವ ಅನಾಥ ಮಹಿಳೆಯನ್ನು ಹಲವು ಬಾರಿ ಅಂಬುಲೆನ್ಸ್ ಮೂಲಕ ಬೇರೆಡೆಗೆ ಕಳುಹಿಸುವ ವ್ಯವಸ್ಥೆ ಮಾಡಿದರೂ ಮತ್ತೆ ರಸ್ತೆ ಬದಿಗೆ ಬಂದು ಮಲಗುತ್ತಿದ್ದಾರೆ. ಸರ್ಕಾರೇತರ ಸಂಸ್ಥೆ ಮಹಿಳೆ ನೆರವಿಗೆ ಮುಂದಾಗಬೇಕಾಗಿದೆ’ ಎಂದು ಹೇಳಿದರು.
ಗ್ರೇಡ್ 2 ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಮಹಿಳೆ ರಕ್ಷಣೆ ಹಾಗೂ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಸಭೆ ಪೌರಾಯುಕ್ತೆ ಲೀನಾ ಬೋಟೋ ಪ್ರತಿಕ್ರಿಯಿಸಿ, ಕೂಡಲೇ ನಗರಸಭೆ ಆರೋಗ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.