ಕೋಲಾರ: ಜಿಲ್ಲೆಯ ಗಡಿಭಾಗ ಮಾಸ್ತಿಯ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಕಟ್ಟಡವನ್ನು ದಾನಿಯೊಬ್ಬರ ₹8 ಕೋಟಿ ನೆರವಿನಿಂದ ಪುನರ್ ನಿರ್ಮಾಣ ಮಾಡಲಾಗಿದೆ. ಜುಲೈ 26ರಂದು ಶಾಲಾ ಕಟ್ಟಡ ಉದ್ಘಾಟನೆಯಾಗಲಿದೆ.
ಅಮೆರಿಕದಲ್ಲಿ ನೆಲೆಸಿರುವ ಗುಜರಾತ್ ಮೂಲದ ಉದ್ಯಮಿ ಜನಾರ್ದನ್ ಠಕ್ಕರ್ ಅವರು, ಠಕ್ಕರ್ ಕುಟುಂಬ ಪ್ರತಿಷ್ಠಾನ ಕಲಿಕಾ ಕೇಂದ್ರದ ಮೂಲಕ ಈ ನೆರವು ನೀಡಿದ್ದಾರೆ. 60 ವರ್ಷ ಹಳೆಯ ಕಟ್ಟಡಕ್ಕೆ ಈಗ ಹೊಸ ಹೊಳಪು ಬಂದಿದ್ದು, ಹೈಟೆಕ್ ಶಾಲೆಯಾಗಿ ಪರಿವರ್ತನೆಗೊಂಡಿದೆ.
ಒಸಾಟ್ (ಒನ್ ಸ್ಕೂಲ್ ಎಟ್ ಎ ಟೈಮ್) ಸ್ವಯಂ ಸೇವಾ ಸಂಸ್ಥೆ ನೇತೃತ್ವದಲ್ಲಿ, ಡಿಜಿಟಲ್ ಶಾಲೆ ಯೋಜನೆಯಡಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ 100ನೇ ಸರ್ಕಾರಿ ಶಾಲೆ ಇದಾಗಿದೆ.
18 ತರಗತಿ ಕೊಠಡಿ, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಕಲಿಕಾ ಚಟುವಟಿಕೆ ಕೊಠಡಿ ಸೇರಿ ಶಾಲೆಗೆ 20 ಕೊಠಡಿ ನಿರ್ಮಿಸಲಾಗಿದೆ. ಗ್ರಂಥಾಲಯ, ಬೋರ್ಡ್, ಬೆಂಚ್, ಡೆಸ್ಕ್ ಸೌಲಭ್ಯವಿದೆ.
ಬಾಲಕರು, ಬಾಲಕಿಯರಿಗೆ ಪ್ರತ್ಯೇಕವಾಗಿ ಮೂರು ಶೌಚಾಲಯ ಬ್ಲಾಕ್ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಸೌರ ವಿದ್ಯುತ್ ವ್ಯವಸ್ಥೆ, ಡಿಜಿಟಲ್ ಟಿ.ವಿ, ಸಿ.ಸಿ.ಟಿ.ವಿ ಅಳವಡಿಸಿದ್ದಾರೆ. ಅಲ್ಲದೇ, ವಿಶಾಲ ಅಡುಗೆ ಕೋಣೆ ನಿರ್ಮಾಣವಾಗುತ್ತಿದ್ದು, ಭೋಜನ ಕೊಠಡಿ ಹಾಗೂ ಸಿಬ್ಬಂದಿ ಕೊಠಡಿ ನಿರ್ಮಿಸಲು ಉದ್ದೇಶಿಸಿದ್ದಾರೆ. ಒಂದು ವರ್ಷದ ಮಟ್ಟಿಗೆ ದಾನಿಯೇ ನಿರ್ವಹಣೆ ಮಾಡಲಿದ್ದಾರೆ.
ಠಕ್ಕರ್ ಕುಟುಂಬ ಬೆಂಗಳೂರು ಸಮೀಪದ ಚಿಕ್ಕಜಾಲದಲ್ಲಿ ಅಕ್ಷಯಪಾತ್ರೆ ಯೋಜನೆಯ ಅಡಿ 35 ಸಾವಿರ ಮಕ್ಕಳಿಗೆ ನಿತ್ಯ ಊಟದ ವ್ಯವಸ್ಥೆಯನ್ನು ಕೂಡ ಮಾಡಿದೆ.
ಶಿಥಿಲಗೊಂಡಿದ್ದ ತರಗತಿ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲಾಗಿದೆ. ಎಲ್ಕೆಜಿಯಿಂದ 8ನೇ ತರಗತಿಯಲ್ಲಿ ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ 800 ಮಕ್ಕಳು ಓದುತ್ತಿದ್ದಾರೆ. ಪ್ರವೇಶಾತಿಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ ದ್ವಿತೀಯ ಪಿಯುವರೆಗೂ ತರಗತಿ ಇವೆ. ಗ್ರಾಮಾಂತರ ಪ್ರದೇಶದಲ್ಲಿ ಇಷ್ಟು ಸೌಲಭ್ಯ ಸಿಕ್ಕಿರುವುದಕ್ಕೆ ಮಕ್ಕಳು, ಪೋಷಕರು, ಶಿಕ್ಷಕರಿಗೆ ಸಂತಸವಾಗಿದೆ.
‘ದಾನಿ ಜನಾರ್ದನ್ ಠಕ್ಕರ್ ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್ಐಇ) ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಉನ್ನತ ವ್ಯಾಸಂಗ ಮಾಡಿ ಉದ್ಯಮ ನಡೆಸುತ್ತಿದ್ದಾರೆ. ಅವರಿಗೆ ಶಿಕ್ಷಣದ ಮೇಲೆ ತುಂಬಾ ಆಸಕ್ತಿ ಇದ್ದು ಪತ್ನಿ ಲಿಂಡಾ ಠಕ್ಕರ್ ಜೊತೆಗೂಡಿ ಕಲಿಕಾ ಗುಣಮಟ್ಟ ಸುಧಾರಣೆಗೆ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಅವರು ಈ ಹಿಂದೆ ಮಾಸ್ತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು’ ಎಂದು ಒಸಾಟ್ ಸಂಸ್ಥೆ ನಿರ್ದೇಶಕ ಬಾಲಕೃಷ್ಣ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಓಸಾಟ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ವಾದಿರಾಜ್ ಭಟ್, ಬಾಲಕೃಷ್ಣ ರಾವ್ ಹಾಗೂ ಯೋಜನಾ ಚಾಂಪಿಯನ್ ವೀರಣ್ಣ ಗೌಡ ನೇತೃತ್ವದಲ್ಲಿ ಮರುನಿರ್ಮಾಣ ನಡೆದಿದೆ. ಇದೇ ಸಂಸ್ಥೆ ಹಿಂದೆ ಮುಳಬಾಗಿಲಿನ ಡಿವಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನವೀಕರಣಗೊಳಿಸಿತ್ತು.
ದಾನಿ ಜನಾರ್ದನ್ ಠಕ್ಕರ್ ದಂಪತಿ ಕೊಡುಗೆ ಗಡಿಭಾಗದ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ಎಲ್ಕೆಜಿಯಿಂದ 8ನೇ ತರಗತಿವರೆಗೆ 800 ಮಕ್ಕಳು
ಶಾಲೆಯ ಕೆಲ ಕೊಠಡಿಗಳನ್ನು ಮರು ನಿರ್ಮಿಸಲಾಗಿದೆ. ಕೊಠಡಿ ಕೊರತೆ ನಿವಾರಿಸಿದೆ. ದಾನಿ ಜನಾರ್ದನ್ ಠಕ್ಕರ್ ಅವರು ₹ 8 ಕೋಟಿ ನೀಡಿದ್ದರುಬಾಲಕೃಷ್ಣ ರಾವ್ ಓಸಾಟ್ ನಿರ್ದೇಶಕ
ಗ್ರಾಮೀಣ ಮಕ್ಕಳಿಗೆ ಹೈಟೆಕ್ ಸೌಲಭ್ಯದ ಶಾಲೆಯಲ್ಲಿ ಕಲಿಯುವ ಸೌಲಭ್ಯ ಸಿಕ್ಕಿದೆ. ಮಾಸ್ತಿಗೆ ಈ ಶಾಲೆ ಕಿರೀಟಪ್ರಾಯವಾಗಲಿದೆ.ವೆಂಕಟಪ್ಪ ಉಪ ಪ್ರಾಂಶುಪಾಲ ಕರ್ನಾಟಕ ಪಬ್ಲಿಕ್ ಶಾಲೆ ಮಾಸ್ತಿ
ಒಸಾಟ್ ನೇತೃತ್ವದಲ್ಲಿ ಅಭಿವೃದ್ಧಿ ಬೆಂಗಳೂರಿನ ಒಸಾಟ್ (One School at a Time) ಸಂಸ್ಥೆಯನ್ನು 2003ರಲ್ಲಿ ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಸ್ಥಾಪಿಸಿದರು. ಈ ಮೂಲಕ ಸಂಸ್ಥಾಪಕ ವಾದಿರಾಜ್ ಭಟ್ ಸಮಾನ ಮನಸ್ಕ ಸ್ನೇಹಿತರು ದಾನಿಗಳ ನೆರವಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಟ್ಟಡಗಳನ್ನು ಮೂಲಸೌಕರ್ಯದೊಂದಿಗೆ ನಿರ್ಮಿಸಲು ಆದ್ಯತೆ ನೀಡುತ್ತಿದ್ದಾರೆ. ಹಳೆಯ ದುಸ್ಥಿತಿ ಆಧಾರದಲ್ಲಿ ಸಂಸ್ಥೆಯ ಸ್ವಯಂ ಸೇವಕರು ಮೂಲಸೌಕರ್ಯ ಅಗತ್ಯವಿರುವ ಶಾಲೆಗಳನ್ನು ಆಯ್ಕೆಮಾಡುತ್ತಾರೆ. ಈವರೆಗೆ 100ಕ್ಕೂ ಅಧಿಕ ಶಾಲಾ ಕಟ್ಟಡಗಳನ್ನು ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೆಗ್ಗಳಿಕೆ ಸಂಸ್ಥೆಯದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.