ADVERTISEMENT

ಪ್ಲಾಸಿಕ್ ಬಳಕೆ: ದಂಡದ ಎಚ್ಚರಿಕೆ

ನಗರಸಭೆ ಅಧ್ಯಕ್ಷೆ ಶ್ವೇತಾ ನಗರ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 12:16 IST
Last Updated 24 ಜನವರಿ 2021, 12:16 IST
ನಗರಸಭೆ ಅಧ್ಯಕ್ಷೆ ಶ್ವೇತಾ ಅವರು ಕೋಲಾರದಲ್ಲಿ ಭಾನುವಾರ ನಗರ ಪ್ರದಕ್ಷಿಣೆ ವೇಳೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಕೆ ಬಗ್ಗೆ ಪರಿಶೀಲನೆ ಮಾಡಿದರು.
ನಗರಸಭೆ ಅಧ್ಯಕ್ಷೆ ಶ್ವೇತಾ ಅವರು ಕೋಲಾರದಲ್ಲಿ ಭಾನುವಾರ ನಗರ ಪ್ರದಕ್ಷಿಣೆ ವೇಳೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಕೆ ಬಗ್ಗೆ ಪರಿಶೀಲನೆ ಮಾಡಿದರು.   

ಕೋಲಾರ: ‘40 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸಿಕ್ ಕವರ್‌ ಮಾರಾಟ ಮಾಡುವವರಿಗೆ ಹಾಗೂ ಬಳಸುವ ಗ್ರಾಹಕರಿಗೆ ದಂಡ ವಿಧಿಸಿ’ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಭಾನುವಾರ ನಗರ ಪ್ರದಕ್ಷಿಣೆ ನಡೆಸಿದ ಅಧ್ಯಕ್ಷರು ಹೊಸ ಬಸ್ ನಿಲ್ದಾಣ, ಹಳೇ ತರಕಾರಿ ಮಾರುಕಟ್ಟೆ, ಕ್ಲಾಕ್‌ ಟವರ್ ಸೇರಿದಂತೆ ಹಲವೆಡೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌್ ಬಳಕೆ ಬಗ್ಗೆ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಅಧಿಕಾರಿಗಳು 40 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸಿಕ್ ಕವರ್‌ ವಶಪಡಿಸಿಕೊಂಡು ನಾಶಪಡಿಸಿದರು.

ನಗರದ ಶ್ರೀರಾಮ ದೇವಾಲಯ ಮುಂಭಾಗದ ರಸ್ತೆಯಲ್ಲಿನ ಒಳಚರಂಡಿ ಕಟ್ಟಿಕೊಂಡಿರುವುದನ್ನು ಗಮನಿಸಿದ ಅಧ್ಯಕ್ಷರು ಶೀಘ್ರವೇ ಚರಂಡಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ADVERTISEMENT

ನೀರಿನ ಸಂಪ್‌: ‘ಬೇಸಿಗೆ ಕಾಲ ಆರಂಭವಾಗುತ್ತಿದ್ದು, ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆಯಿದೆ. ಹೀಗಾಗಿ ನಗರಸಭೆ ವತಿಯಿಂದ ಪ್ರತಿ ವಾರ್ಡ್‌ನಲ್ಲಿ ನೀರಿನ ಸಂಪ್ ನಿರ್ಮಿಸಲಾಗುತ್ತದೆ. 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 35 ವಾರ್ಡ್‌ಗಳಲ್ಲಿ ಕೊಳವೆ ಬಾವಿ ಕೊರೆಸಲು ತೀರ್ಮಾನಿಸಲಾಗಿದೆ. ಈವರೆಗೆ 6 ಕೊಳವೆ ಬಾವಿ ಕೊರೆಸಿದ್ದು, ಎಲ್ಲೆಡೆ ನೀರು ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಅವೇಲಿ ಮೊಹಲ್ಲಾ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಕೊಳವೆ ಬಾವಿ ಕೊರೆಸಲು ಜಾಗ ಗುರುತಿಸಲಾಗಿದೆ. ಗಲ್‌ಪೇಟೆ, ಮಹಾಲಕ್ಷ್ಮೀ ಲೇಔಟ್, ಶಹಿನ್‌ಷಾ ನಗರ ಸೇರಿದಂತೆ ಬಹುಪಾಲು ವಾರ್ಡ್‌ಗಳ ಕೊಳವೆ ಬಾವಿಗಳಲ್ಲಿ ನೀರಿದ್ದು, ಕೆಟ್ಟು ಹೋಗಿರುವ ಪಂಪ್‌ ಮೋಟರ್‌ ರಿಪೇರಿ ಮಾಡಿಸಬೇಕು’ ಎಂದು ತಿಳಿಸಿದರು.

ನಗರದ 19ನೇ ವಾರ್ಡ್‌ ವ್ಯಾಪ್ತಿಯ ದರ್ಗಾ ಮೊಹಲ್ಲಾದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುತ್ತಿದ್ದ ಸ್ಥಳಕ್ಕೆ ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದರು. 6ನೇ ವಾರ್ಡ್‌ ವ್ಯಾಪ್ತಿಯ ಧರ್ಮರಾಯ ನಗರದಲ್ಲಿ ನೂತನ ಕೊಳವೆ ಬಾವಿಗೆ ಪೂಜೆ ಸಲ್ಲಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ಸದಸ್ಯರಾದ ಬಿ.ಎಂ.ಮುಬಾರಕ್, ಅಪೂರ್ವ, ಗುಣಶೇಖರ್, ಸಂಗೀತಾ, ಮಾಜಿ ಸದಸ್ಯ ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.