ADVERTISEMENT

ಕೋಲಾರ: ಪೋಷಕರ ಕಳೆದುಕೊಂಡ ಮಕ್ಕಳಿಗೆ ಪಿ.ಎಂ ಕೇರ್ಸ್‌ ಸೌಲಭ್ಯ

ಅಂಚೆ ಕಚೇರಿಯಲ್ಲಿ ಠೇವಣಿ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 16:27 IST
Last Updated 30 ಮೇ 2022, 16:27 IST
ವೆಂಕಟ್‌ರಾಜಾ
ವೆಂಕಟ್‌ರಾಜಾ   

ಕೋಲಾರ: ‘ಕೋವಿಡ್ ಪೋಷಕರಿಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರದ ಪಿ.ಎಂ ಕೇರ್ಸ್ ಫಾರ್ ಚಿರ್ಲನ್ಸ್‌ ಯೋಜನೆಯಡಿ ಸೌಲಭ್ಯ ಒದಗಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಿ.ಎಂ ಕೇರ್ಸ್ ಫಾರ್ ಚಿರ್ಲನ್ಸ್‌ ಯೋಜನೆಯು ಶಿಮ್ಲಾದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಮಕ್ಕಳ ಜತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿದರು' ಎಂದು ಹೇಳಿದರು.

‘ಆಜಾದಿ ಕಾ ಅಮೃತ ಮಹೋತ್ಸವ್ ಅಂಗವಾಗಿ ನರೇಂದ್ರ ಮೋದಿಯವರು ಮಂಗಳವಾರ (ಮೇ 31) ಬೆಳಿಗ್ಗೆ 11 ಗಂಟೆಗೆ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಕೇಂದ್ರ ಸರ್ಕಾರದ 9 ಸಚಿವಾಲಯದ 16 ಯೋಜನೆ ಮತ್ತು ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ಏಕಕಾಲಕ್ಕೆ ವಿಡಿಯೋ ಸಂವಾದ ನಡೆಸುತ್ತಾರೆ. ಈ 16 ಜನಪರ ಯೋಜನೆಗಳನ್ನು ಬಡ ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ’ ಎಂದರು.

ADVERTISEMENT

‘ಜಿಲ್ಲಾ ಮಟ್ಟದಲ್ಲಿ ಈ ವರ್ಚ್ಯೂವಲ್‌ ನೇರ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ಕಾರ್ಯಕ್ರಮ ಉದ್ಘಾಟಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಪಿ.ಎಂ ಕೇರ್ಸ್ ಫಾರ್ ಚಿರ್ಲನ್ಸ್‌ ಯೋಜನೆಯಲ್ಲಿ 5 ಮಕ್ಕಳನ್ನು ಅನುಮೋದಿಸಿದ್ದು, ಈ ಪೈಕಿ 3 ಗಂಡು ಹಾಗೂ 2 ಹೆಣ್ಣು ಮಕ್ಕಳು ಸೇರಿದ್ದಾರೆ. ಕೇಂದ್ರದ ಮಾರ್ಗಸೂಚಿ ಅನ್ವಯ 18 ವರ್ಷದೊಳಗಿನ ಮಕ್ಕಳಿಗೆ ನಿಗದಿಪಡಿಸಿರುವ ನಿಶ್ಚಿತ ಮೊತ್ತವನ್ನು ಅಂಚೆ ಕಚೇರಿಯಲ್ಲಿ ಠೇವಣಿ ಇಡಲಾಗುವುದು. ಎಲ್ಲಾ ಅನುಮೋದಿತ ಮಕ್ಕಳ ಖಾತೆಯನ್ನು ಅಂಚೆ ಕಚೇರಿಯಲ್ಲಿ ತೆರೆಯಲಾಗಿದೆ’ ಎಂದು ವಿವರಿಸಿದರು.

ಸ್ಟೈಫಂಡ್‌: ‘ಅಂಚೆ ಕಚೇರಿಯಲ್ಲಿ ಫಲಾನುಭವಿ ಮತ್ತು ಜಿಲ್ಲಾಧಿಕಾರಿ ಜಂಟಿ ಖಾತೆಯಲ್ಲಿ ಇಟ್ಟಿರುವ ಇಡಿಗಂಟಿನ ಮೇಲೆ ಲಭ್ಯವಾಗುವ ಬಡ್ಡಿ ಹಣವನ್ನು 18 ವರ್ಷ ಪೂರ್ಣಗೊಂಡ ನಂತರ 23ನೇ ವಯಸ್ಸಿನವರೆಗೆ ಸ್ಪೈಫಂಡ್ ರೀತಿಯಲ್ಲಿ ಒದಗಿಸಲಾಗುವುದು. ಫಲಾನುಭವಿಗಳು 23 ವರ್ಷಕ್ಕೆ ಬಂದಾಗ ಇಡಿಗಂಟಿನ ರೂಪದಲ್ಲಿ ₹ 10 ಲಕ್ಷ ಆರ್ಥಿಕ ನೆರವನ್ನು ಅವರ ಭವಿಷ್ಯದ ಉದ್ದೇಶಕ್ಕಾಗಿ ಕಲ್ಪಿಸಲಾಗುವುದು. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕಿಟ್ ವಿತರಿಸಲಾಗುವುದು’ ಎಂದು ಹೇಳಿದರು.

‘ಫಲಾನುಭವಿಗಳ ಉನ್ನತ ಶಿಕ್ಷಣಕ್ಕೆ ನೆರವು ಮತ್ತು ₹ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು, ಸುಪ್ರೀಂ ಕೋರ್ಟ್‌ನ ಸೂನೆ ಅನ್ವಯ ಪಿ.ಎಂ ಕೇರ್ಸ್‍ನ ಎಲ್ಲಾ ಅನುಮೋದಿತ ಫಲಾನುಭವಿಗಳಿಗೆ ₹ 50 ಸಾವಿರ ಪರಿಹಾರ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಒದಗಿಸಲಾಗಿದೆ. ಪಿ.ಎಂ ಕೇರ್ಸ್‍ನ ಅನುಮೋದಿತ ಫಲಾನುಭವಿಗಳಿಗೆ ಪ್ರಾಯೋಜಕತ್ವದಡಿ ತಿಂಗಳಿಗೆ ₹ 2 ಸಾವಿರ ಆರ್ಥಿಕ ನೆರವನ್ನು ಪೋರ್ಟಲ್‍ನಲ್ಲಿ ಜಿಲ್ಲಾ ನ್ಯಾಯಾಧೀಶರ ಲಾಗಿನ್ ಮೂಲಕ ಅನುಮೋದನೆಗೊಂಡ ದಿನದಿಂದ ಅನ್ವಯವಾದಂತೆ ಒದಗಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.