ಕೋಲಾರ: ಪೋಷಕರು ಜಮೀನು ಕೊಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಮಗಳು ವೃದ್ಧ ತಂದೆ–ತಾಯಿಯು ಬೆಳೆದಿದ್ದ ರೇಷ್ಮೆ ಬೆಳೆ ನಾಶಪಡಿಸಿರುವ ಘಟನೆ ತಾಲ್ಲೂಕಿನ ಯಳಚೀಪುರದಲ್ಲಿ ನಡೆದಿದೆ.
ಯಳಚೀಪುರ ಗ್ರಾಮದ ವೃದ್ಧ ದಂಪತಿ ರಾಮಣ್ಣ ಮತ್ತು ಲಕ್ಷ್ಮಮ್ಮ ಅವರು ತಮ್ಮ ಜಮೀನಿನಲ್ಲಿ ರೇಷ್ಮೆ ಹುಳು ಸಾಕಾಣಿಕೆಗಾಗಿ ಹಿಪ್ಪು ನೇರಳೆ ಬೆಳೆದಿದ್ದರು. ದಂಪತಿಯ ಹಿರಿಯ ಮಗಳು ಚೌಡಮ್ಮ ಜಮೀನು ತನ್ನ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸುತ್ತಿದ್ದರು. ಆದರೆ, ವೃದ್ಧ ದಂಪತಿ ಇದಕ್ಕೆ ಒಪ್ಪಿರಲಿಲ್ಲ.
ಇದರಿಂದ ಅಸಮಾಧಾನಗೊಂಡ ಚೌಡಮ್ಮ, ಜಮೀನಿನಲ್ಲಿದ್ದ ಹಿಪ್ಪು ನೇರಳೆ ಗಿಡಗಳಿಗ ವಿಷ ಸಿಂಪಡಿದ್ದಾರೆ. ಈ ಸೊಪ್ಪು ತಿಂದ ರೇಷ್ಮೆ ಹುಳುಗಳು ಮೃತಪಟ್ಟಿವೆ. ಇದರಿಂದ ಸುಮಾರು 1 ಲಕ್ಷ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಣ್ಣ ಮತ್ತು ಲಕ್ಷ್ಮಮ್ಮ ದಂಪತಿಯು ಸಾಲ ಮಾಡಿ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದರು. ಇದರಿಂದ ಬಂದ ಹಣದಲ್ಲೇ ದಂಪತಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ದಂಪತಿಯ ಮಗಳು ಮತ್ತು ಅಳಿಯ ಲಕ್ಷ್ಮಣ್, ಮೊಮ್ಮಗ ಆನಂದ್ ಆಸ್ತಿ ಮೇಲಿನ ಆಸೆಗಾಗಿ ಬೆಳೆ ನಾಶಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.