ನಂಗಲಿ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮೇ 14 ರವರೆಗೂ ಘೋಷಣೆ ಮಾಡಿರುವ ಲಾಕ್ಡೌನ್ ಮೊದಲನೆಯ ದಿನ ನಂಗಲಿ ಭಾಗ ಸಂಪೂರ್ಣ ಸ್ತಬ್ಧಗೊಂಡಿತ್ತು.
ಮುಳಬಾಗಿಲು ನಗರದ ನಂತರ ಅತಿ ಹೆಚ್ಚು ಜನಸಂಖ್ಯೆ, ವ್ಯಾಪಾರ ವಹಿವಾಟನ್ನು ಹೊಂದಿರುವ ನಂಗಲಿಯಲ್ಲಿ ಬೆಳಿಗ್ಗೆ 10 ಗಂಟೆಯ ನಂತರ ಎಲ್ಲಾ ಅಂಗಡಿಗಳವರು ತಮಗೆ ತಾವೇ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಬೆಳಿಗ್ಗೆ ಹತ್ತು ಗಂಟೆಯ ನಂತರ ಯಾವುದೇ ಅಂಗಡಿಗಳನ್ನು ತೆಗೆಯುವುದಿಲ್ಲ ಎಂಬುವುದನ್ನು ಅರಿತ ಜನ ತಮ್ಮ ದಿನ ನಿತ್ಯದ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಂಡು ಮನೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂದಿತು.
ಇನ್ನು ಹೆಬ್ಬಣಿ, ಕೆ.ಬೈಯಪಲ್ಲಿ, ಬೈರಕೂರು, ಎನ್.ವಡ್ಡಹಳ್ಳಿ, ತಿಮ್ಮರಾವುತ್ತನಹಳ್ಳಿ, ನಂಗಲಿ ಗಡಿ ಮುಂತಾದ ಕಡೆಗಳಲ್ಲೂ ಹತ್ತು ಗಂಟೆಯ ವಿನಾಯಿತಿ ವಾಹನಗಳನ್ನು ಬಿಟ್ಟು ಮತ್ತೆ ಯಾವ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಮತ್ತು ಆಕಸ್ಮಿಕವಾಗಿ ರಸ್ತೆಗೆ ಬರುತ್ತಿದ್ದ ಜನ ಮತ್ತು ವಾಹನ ಸವಾರರನ್ನು ಪೊಲೀಸ್ ಸಿಬ್ಬಂದಿ ಮನೆಗೆ ವಾಪಸ್ ಕಳುಹಿಸುತ್ತಿದ್ದರು.
ಇನ್ನು ರಾಜ್ಯದ ಗಡಿಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಆಂಧ್ರಪ್ರದೇಶದಲ್ಲಿ ಲಾಕ್ ಡೌನ್ ಇಲ್ಲ. ಅಲ್ಲಿಂದ ಕೆಲವು ವಾಹನ ಸವಾರರು ರಾಜ್ಯದ ಗಡಿ ರಾಷ್ಟ್ರೀಯ ಹೆದ್ದಾರಿ 75 ರ ಮೂಲಕ ಬರುತ್ತಿದ್ದವರನ್ನು ತಡೆದು ಕರ್ನಾಟಕದಲ್ಲಿ ಲಾಕ್ ಡೌನ್ ಇರುವ ಕುರಿತು ನಂಗಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿ.ವರಲಕ್ಷ್ಮಮ್ಮ ಮನವರಿಕೆ ಮಾಡಿ ವಾಪಸ್ ಕಳುಹಿಸುತ್ತಿದ್ದರು.
ಲಾಕ್ ಡೌನ್ ಇದ್ದೂ ಅಲ್ಲಲ್ಲಿ ಸುಖಾ ಸುಮ್ಮನೆ ರಸ್ತೆಗಳಿಗೆ ಬರುವವರಿಗೆ ಪೊಲೀಸ್ ಸಿಬ್ಬಂದಿ ಗದರುತ್ತಿದ್ದ ದೃಶ್ಯವೂ ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.