ADVERTISEMENT

ಕೋಲಾರ | ಮಂಜುನಾಥಗೌಡ ಗೆದ್ದರೆ ರಾಜಕೀಯ ನಿವೃತ್ತಿ: ನಂಜೇಗೌಡ ಸವಾಲು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:56 IST
Last Updated 18 ಸೆಪ್ಟೆಂಬರ್ 2025, 5:56 IST
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ   

ಕೋಲಾರ: ಹೈಕೋರ್ಟ್‌ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆದು ಪ್ರತಿಸ್ಪರ್ಧಿ ಕೆ.ಎಸ್‌.ಮಂಜುನಾಥಗೌಡ ಗೆದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದರು.

ತಾಲ್ಲೂಕಿನ ರಾಮಸಂದ್ರ ಗಡಿಭಾಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆತನನ್ನು ನಾನೇ ಹೊಸಕೋಟೆಯಿಂದ ಕರೆದುಕೊಂಡು ಬಂದು ಮಾಲೂರು ಕ್ಷೇತ್ರದಲ್ಲಿ ಗೆಲ್ಲಿಸಿದ್ದೆ. ಆಗ ನಾನೇ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದಿತ್ತು. ಕೆಲ ನಾಯಕರ ಮಾತು ಕೇಳಿ ತಪ್ಪು ಮಾಡಿದ್ದೆ. ಆದರೆ, ಈಗ ಆತನಿಗೆ ಹುಚ್ಚು ಹಿಡಿದಿದ್ದು, ತಿಕ್ಲನ ರೀತಿ ಆಡುತ್ತಾ ಶಾಸಕನಾದ ಭ್ರಮೆಯಲ್ಲಿದ್ದಾನೆ. ಅವನ ಕಡೆಯ ಕೆಲವರು ಹಗಲು ಕನಸು ಕಾಣುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ’ ಎಂದು ಹರಿಹಾಯ್ದರು.

‘ಹೈಕೋರ್ಟ್‌ ಮರು ಮತ ಎಣಿಕೆಗೆ ಆದೇಶ ಮಾಡಿರುವುದರ ಜೊತೆಗೆ ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಹೀಗಾಗಿ, ನಾನು ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತಿದ್ದೇನೆ. ಬರೀ ಮರು ಮತ ಎಣಿಕೆಗೆ ಸೂಚಿಸಿದ್ದರೆ ಸುಮ್ಮನಿರುತ್ತಿದೆ. ಹಿಂದೆಯೂ ಈ ಮಾತು ಹೇಳಿದ್ದೆ. ಅಸಿಂಧು ಮಾಡಿರುವ ಕಾರಣ ಈಗ ಇಡೀ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸುತ್ತೇನೆ. ಅದಕ್ಕೆ 30 ದಿನಗಳ ಕಾಲಾವಕಾಶವಿದೆ. ನನ್ನ ಚುನಾವಣೆಯನ್ನು ಅಸಿಂಧುಗೊಳಿಸಿದ ಮೇಲೆ ಮರು ಮತ ಎಣಿಕೆ ಬದಲು ಚುನಾವಣೆಗೆ ಹೋಗಬಹುದಿತ್ತು’ ಎಂದು ಹೇಳಿದರು.

ADVERTISEMENT

ಮಾಲೂರಿನಲ್ಲಿ ಮತ ಕಳ್ಳತನ ನಡೆದಿದೆ ಎಂದು ಮಂಜುನಾಥಗೌಡ ಆರೋಪಿಸಿರುವ ಕುರಿತು, ‘2023ರಲ್ಲಿ ನಾನು ಶಾಸಕನಾಗಿದ್ದೆ ನಿಜ. ಆದರೆ, ವಿಧಾನಸಭೆ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಅವರದ್ದೇ ಮಂತ್ರಿಗಳು, ಸಂಸದ, ಅಧಿಕಾರಿಗಳು ಹಾಗೂ ಪೊಲೀಸರು ಇದ್ದರು. ನಾನು ಮತ ಎಣಿಕೆ ದಿನ ಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದೆ. ತಾವೇ ಕಾವಲಿದ್ದು ಮತ ಎಣಕೆ ಮಾಡಿಸಿದ್ದಿರಿ. ಕೊನೆಯಲ್ಲಿ ಆತನ ತಕರಾರಿನ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ವಿ.ವಿ ಪ್ಯಾಟ್ ತಾಳೆ ಮಾಡಲು ಲಾಟರಿ ಎತ್ತಲು ಮುಂದಾದರು. ಮಂಜುನಾಥಗೌಡನ ಕೈಯಲ್ಲಿ ಲಾಟರಿ ಎತ್ತಿಸಿದರು. ನಂತರ ಫಲಿತಾಂಶ ಘೋಷಿಸಿದರು. ಈಗ ಆತ ಏನೇನೋ ಮಾತನಾಡುತ್ತಿದ್ದಾನೆ’ ಎಂದರು.

‘ನಾನ್ಯಾಕೆ ವಿಡಿಯೊ, ಸಿ.ಸಿ.ಟಿ.ವಿ ದೃಶ್ಯ ಕಳ್ಳತನ ಮಾಡಲಿ. ಆ ಚುನಾವಣೆಗೆ ಕೇಂದ್ರದಿಂದಲೂ ನಿರೀಕ್ಷಕರು ಬಂದಿದ್ದರು. ಅದನ್ನು ಸರಿಯಾಗಿ ಸಂಗ್ರಹಿಸಿಡುವುದು ಅಧಿಕಾರಿಗಳ ಜಬಾಬ್ದಾರಿ‌. ಅಧಿಕಾರಿಗಳೇನು ನನ್ನ ಸಂಬಂಧಿಕರೇ’ ಎಂದು ಪ್ರಶ್ನಿಸಿದರು.

ಮಾಲೂರು ಕ್ಷೇತ್ರಕ್ಕೆ ಈಗ ಶಾಸಕರು ಇಲ್ಲ, ತಬ್ಬಲಿಯಾಗಿದೆ ಎಂಬ ಮಂಜುನಾಥಗೌಡ ಹೇಳಿಕೆಗೆ, ‘ಹೈಕೋರ್ಟ್‌ ತನ್ನ ಆದೇಶಕ್ಕೆ 30 ದಿನಗಳ ತಡೆಯಾಜ್ಞೆ ನೀಡಿದೆ. ನಾನು ಈಗಲೂ ಶಾಸಕನೇ. ಅವರಂತೆ ಮಾಜಿ ಶಾಸಕ ಅಲ್ಲ, ಮಾಲೂರು ಕ್ಷೇತ್ರ ತಬ್ಬಲಿಯೂ ಅಲ್ಲ’ ಎಂದು ತಿರುಗೇಟು ನೀಡಿದರು.

ಹೈಕೋರ್ಟ್‌ನ ಇಡೀ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸುತ್ತೇನೆ ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ–ಶಾಸಕ ಮಾಜಿ ಶಾಸಕ ಮಂಜುನಾಥಗೌಡ ವಿರುದ್ಧ ವಾಗ್ದಾಳಿ

ಮರು ಮತ ಎಣಿಕೆ ನಡೆಯಲಿ ಅಥವಾ ಹೊಸದಾಗಿ ಚುನಾವಣೆ ನಡೆಯಲಿ ಮಂಜುನಾಥಗೌಡಗೆ ಮತ್ತೊಮ್ಮೆ ಸೋಲು ಕಟ್ಟಿಟ್ಟ ಬುತ್ತಿ. ಆತ ಮತ್ತೆ ಮಾಲೂರಿನಲ್ಲಿ ಶಾಸಕ ಆಗಲ್ಲ
ಕೆ.ವೈ.ನಂಜೇಗೌಡ ಶಾಸಕ
ಸುರ್ಜೇವಾಲಾ ಸಿ.ಎಂ ಮಾತನಾಡಿದ್ದಾರೆ
‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸೇರಿದಂತೆ ಅನೇಕರು ನನ್ನ ಜೊತೆ ಮಾತನಾಡಿದ್ದಾರೆ. ಈ ಪ್ರಕರಣದಿಂದ ಜನರಲ್ಲಿ ನನ್ನ ಬಗ್ಗೆ ಕನಿಕರ ಬಂದಿದೆ’ ಎಂದು ನಂಜೇಗೌಡ ಹೇಳಿದರು
ಬೆಂಗಳೂರಿನಿಂದ ಬಂದು ಹೋಗುವ ರಿಯಲ್‌ ಎಸ್ಟೇಟ್‌ದಾರ ನಾನಲ್ಲ
‘ನಾನು 1986ರಿಂದ ಮಾಲೂರು ತಾಲ್ಲೂಕಿನಲ್ಲಿ ರಾಜಕಾರಣದಲ್ಲಿದ್ದೇನೆ. ಕ್ಷೇತ್ರದ ಜನ ನನಗೆ ಹಲವು ಅವಕಾಶ ಮಾಡಿಕೊಟ್ಟಿದ್ದಾರೆ. ಹೈಕೋರ್ಟ್‌ ಆದೇಶ ಬಂದ ದಿನ ಮಧ್ಯರಾತ್ರಿವರೆಗೆ ಜನರು ನನ್ನ ಮನೆ ಬಳಿ ಇದ್ದರು ಬೆಳಿಗ್ಗೆ ಮತ್ತೆ ಸಾವಿರಾರು ಜನ ಸೇರಿದ್ದರು. ಬೆಂಗಳೂರಿನಿಂದ ಮಾಲೂರು ಕ್ಷೇತ್ರಕ್ಕೆ ಬಂದು ಹೋಗುವ ರಿಯಲ್‌ ಎಸ್ಟೇಟ್‌ದಾರರಂತೆ ನಾನು ಅಲ್ಲ’ ಎಂದು ನಂಜೇಗೌಡ ಹೇಳಿದರು.  ‘ಹಣೇಲಿ ಬರೆದಿದ್ದರೆ ಮುಂದೆ ಮಂತ್ರಿ ಆಗುತ್ತೇನೆ ಇಲ್ಲದಿದ್ದರೆ ಮನೆಯಲ್ಲಿರುತ್ತೇನೆ. ಅ.31ಕ್ಕೆ ಮಾಲೂರು ಕ್ಷೇತ್ರದಲ್ಲಿ ನಿಗದಿಯಾಗಿರುವ ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುತ್ತದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.