ಕೋಲಾರ: ‘ದೇಶದ ಭದ್ರ ಬುನಾದಿಯಾಗಿರುವ ಪ್ರಾಥಮಿಕ ಶಿಕ್ಷಣವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಶಾಲೆಯ ಸರ್ವತ್ತೋಮುಖ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು ಸಲಹೆ ನೀಡಿದರು.
ತಾಲ್ಲೂಕಿನ ಹರಟಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಮಾತನಾಡಿ, ‘ಮಕ್ಕಳನ್ನು ಸಂಪತ್ತಾಗಿ ಬೆಳೆಸಬೇಕು. ಅವರಲ್ಲಿ ಹೆಚ್ಚಿನ ಜ್ಞಾನ ತುಂಬಿ ಸಮಾಜಕ್ಕೆ ಆದರ್ಶಪ್ರಾಯರಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.
‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಕೊಡುಗೆ ನೀಡಬೇಕು. ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು ಮತ್ತು ವಿದ್ಯಾರ್ಥಿಗಳ ಪ್ರತಿ ಪ್ರಶ್ನೆಗೆ ಉತ್ತರಿಸುವ ಜ್ಞಾನ ಭಂಡಾರ ಉಳಿಸಿಕೊಳ್ಳಬೇಕು. ಶಾಲಾ ಮಕ್ಕಳು ನಮ್ಮ ಮಕ್ಕಳೆಂಬ ಭಾವನೆ ಶಿಕ್ಷಕರಲ್ಲಿ ಬಲಗೊಂಡರೆ ಮಾತ್ರ ಸರ್ಕಾರಿ ಶಾಲೆಗಳ ಬಲವರ್ಧನೆ ಸಾಧ್ಯ. ಕಲಿಕಾ ವಿಧಾನದಲ್ಲಿ ಸುಧಾರಣೆ ಅಗತ್ಯ’ ಎಂದು ಕಿವಿಮಾತು ಹೇಳಿದರು.
‘ತರಗತಿಯಲ್ಲಿ ಕಲಿಸುವ ಪಾಠ ಮಕ್ಕಳಿಗೆ ಅರ್ಥವಾಗುತ್ತಿಲ್ಲ ಎಂದರೆ ಶಿಕ್ಷಕರ ಬೋಧನಾ ವಿಧಾನದಲ್ಲೇ ಲೋಪವಿದೆ ಎಂದರ್ಥ. ಕಲಿಕಾ ವಿಧಾನ ಬದಲಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಮಕ್ಕಳಲ್ಲಿ ಗೊಂದಲ ಮೂಡಿಸದೆ ಆತ್ಮವಿಶ್ವಾಸ ತುಂಬಿ. ಪ್ರತಿ ಪರೀಕ್ಷೆಯ ನಂತರ ಫಲಿತಾಂಶ ಅವಲೋಕಿಸಿ. ಮಗು ಕಲಿಯಲು ಸುಲಭವಾಗುವ ರೀತಿಯಲ್ಲಿ ಕಲಿಕಾ ವಿಧಾನ ಬದಲಿಸಿಕೊಳ್ಳಿ’ ಎಂದು ಹೇಳಿದರು.
ಶಾಲೆಯ ಅಡುಗೆ ಕೊಠಡಿಗೆ ಭೇಟಿ ನೀಡಿದ ಕಾರ್ಯ ನಿರ್ವಹಣಾಧಿಕಾರಿಯು ಸ್ವಚ್ಛತೆ, ಅಡುಗೆ ಸಿದ್ಧತೆ ಪರಿಶೀಲಿಸಿದರು. ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿ, ಶುಚಿ ರುಚಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹರಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ಶಾಲೆ ಮುಖ್ಯ ಶಿಕ್ಷಕ ಜೆ.ಶ್ರೀನಿವಾಸ್, ಶಿಕ್ಷಕರಾದ ಕೃಷ್ಣಪ್ಪ, ಗೋವಿಂದಪ್ಪ, ಮುನಿಯಪ್ಪ, ಮೀನಾ, ಮಂಜುಳಾ, ಮಮತಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.