ಬಂಗಾರಪೇಟೆ: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪಟ್ಟಣದ 24ನೇ ವಾರ್ಡ್ ನಿವಾಸಿಗಳು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ದೇಶಹಳ್ಳಿ, ಸಿದ್ಧಾರ್ಥನಗರ, ರಾಜೇಂದ್ರ ಬಡಾವಣೆಗೆ 3 ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಸುಮಾರು 5 ಸಾವಿರ ಜನಸಂಖ್ಯೆಯುಳ್ಳ ಈ ವಾರ್ಡ್ಗೆ ಕೇವಲ 10 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಅದು ಸಾಕಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಿಗಾಗಿ ನಿತ್ಯ ಜಗಳ ನಡೆಯುವಂತಾಗಿದೆ. ಬಡಾವಣೆಯಲ್ಲಿ ಇದ್ದ ಕೊಳವೆಬಾವಿ ಬತ್ತಿಹೋಗಿದ್ದು, ರೀಬೋರ್ ಮಾಡಿಸಲಾಯಿತು. ಆದರೂ, ನೀರು ಸಿಗಲಿಲ್ಲ. ಪುರಸಭೆ ಸದಸ್ಯರಾಗಿ ಕನಿಷ್ಠ ನೀರು ಕೊಡಲಾಗುತ್ತಿಲ್ಲ ಎಂದು ಜನರು ಛೀಮಾರಿ ಹಾಕುತ್ತಿದ್ದಾರೆ. ಅವರಿಗೆ ಸಬೂಬು ನೀಡಲಾಗುತ್ತಿಲ್ಲ ಎಂದು ಪ್ರಭಾಕರರಾವ್ ಅಸಮಾಧಾನ ವ್ಯಕ್ತಪಡಿಸಿದರು.
ನಿತ್ಯ ಕನಿಷ್ಠ 20 ಟ್ಯಾಂಕರ್ ನೀರು ಪೂರೈಕೆ ಮಾಡಬೇಕು ಅಥವಾ ವಾರಕೊಮ್ಮೆ ಪೈಪ್ಲೈನ್ ಮೂಲಕ ನೀರು ಬಿಡಬೇಕು. ಸ್ಪಂದಿಸದಿದ್ದರೆ ವಾರ್ಡ್ ನಿವಾಸಿಗಳೊಂದಿಗೆ ಪುರಸಭೆ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಧಾವಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ಗುರುವಾರದಿಂದ ಹೆಚ್ಚುವರಿಯಾಗಿ 5 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುವುದು. ಜೂನಿಯರ್ ಕಾಲೇಜು ಬಳಿ ಟ್ಯಾಂಕ್ ನಿರ್ಮಾಣ ಆಗುತ್ತಿದ್ದು, ಕಾಮಗಾರಿ ಪೂರ್ಣ ಗೊಂಡ ಬಳಿಕ ಸಮರ್ಪಕ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಪ್ರಭಾಕರ್ ರಾವ್ ತಿಳಿಸಿದರು. ಪ್ರಭಾಕರ್ ರಾವ್ ನೇತೃತ್ವ ವಹಿಸಿದ್ದರು. ಕೆರೆಕೋಡಿ ನಾರಾಯಣ ಸ್ವಾಮಿ, ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.