ADVERTISEMENT

ನಾದಸ್ವರ ಕಲಾವಿದ ತ್ಯಾಗರಾಜಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 6:18 IST
Last Updated 1 ನವೆಂಬರ್ 2021, 6:18 IST
ಸಿ.ತ್ಯಾಗರಾಜ
ಸಿ.ತ್ಯಾಗರಾಜ   

ಮಾಲೂರು: ಕಳೆದ 50 ವರ್ಷಗಳಿಂದ ನಾದಸ್ವರ ವಾದಕರಾಗಿ ಕಲಾ ಸೇವೆ ಮಾಡುತ್ತಿರುವ ಸಿ.ತ್ಯಾಗರಾಜ (71) ಅವರು ತಮಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅಪ್ಪಟ ಗ್ರಾಮೀಣ ಭಾಗದ ಪ್ರತಿಭೆ ನಾದಸ್ವರ ವಿದ್ವಾನ್ ಸಿ.ತ್ಯಾಗರಾಜು ಅವರು ತಾಲ್ಲೂಕಿನ ಮಾಸ್ತಿ ಗ್ರಾಮದವರು. ಸುಮಾರು 50 ವರ್ಷಗಳಿಂದ ಸತತವಾಗಿ ಈ ಕಲಾ ಸೇವೆ ಅವರ ಕೈ ಹಿಡಿದಿದೆ.

ತಂದೆ ಚಿನ್ನಪ್ಪ, ತಾಯಿ ಹೊಬಮ್ಮ ಪುತ್ರನಾದ ಸಿ.ತ್ಯಾಗರಾಜ ತಮ್ಮ ಬಾಲ್ಯದಲ್ಲೇ ಹುಟ್ಟೂರು ಚವರಮಂಗಲದಿಂದ ಮಾಸ್ತಿ ಗ್ರಾಮದಲ್ಲಿದ್ದ ತನ್ನ ಅಜ್ಜಿ ಮನೆಗೆ ಬಂದು ನೆಲೆಸಿದರು. ಬಾಲ್ಯದಿಂದಲೇ ನಾದಸ್ವರ ವಾದನ ಕಲಿಕೆಯಲ್ಲಿ ಪರಿಣತಿ ಸಾಧಿಸಿದರು. ಗುರುಗಳಾದ ಕುಡಿಯನೂರು ರಾಜಣ್ಣ ಮತ್ತು ಕರಬನಹಳ್ಳಿ ಹರಬಣ್ಣ ಹಾಗೂ ಕೋಲಾರದ ಶ್ರೀರಾಮಣ್ಣ ಅವರ ಬಳಿ ನಾದಸ್ವರ ಕಲಿತರು.

ADVERTISEMENT

ತಮ್ಮ 17ವಯಸ್ಸಿನಿಂದಲೇ ಮಾಸ್ತಿ ವೆಂಕಟರಮಣಸ್ವಾಮಿ ದೇಗುಲದಲ್ಲಿ ನಾದಸ್ವರ ವಾದಕರಾಗಿ ಕಲಾ ಸೇವೆ ಆರಂಭಿಸಿದ ಅವರು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಜಾನಪದ ಜಾತ್ರೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳು ಹಾಗೂ ಹೆಸರಾದಂತ ದೇವಾಲಯಗಳಲ್ಲಿ ನಾದಸ್ವರ ಕಾರ್ಯಕ್ರಮ ನೀಡುತ್ತಾ ಬಂದಿರುವ ಇವರು ಡೋಲ್ ಚಕ್ರವರ್ತಿ ಡಾ.ಮುನಿರತ್ನಂ, ತಂಜಾವೂರು ಟಿ.ಆರ್.ಗೋವಿಂದರಾಜನ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕಲಾವಿದರ ಜತೆಯಲ್ಲೂ ನಾದಸ್ವರ ಕಾರ್ಯಕ್ರಮ ನೀಡುವ ಹೆಗ್ಗಳಿಕೆ ಇವರದ್ದಾಗಿದೆ.

’ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ. 50 ವರ್ಷದ ಪ್ರಾಮಾಣಿಕ ಸೇವೆಗೆ ಸಂದಿರುವ ಮಹತ್ವದ ಗೌರವ ಎಂದು ಭಾವಿಸುತ್ತೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.