ಕೆಜಿಎಫ್: ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ತಾಲ್ಲೂಕಿನಲ್ಲಿರುವ ಅತ್ಯಂತ ದೊಡ್ಡ ಕೆರೆ ರಾಮಸಾಗರ ಕೆರೆಯು ಬುಧವಾರ ತುಂಬಿ, ಕೋಡಿ ಬಿದ್ದಿದೆ.
ಮಳೆಯಿಂದಾಗಿ ಬೇತಮಂಗಲ ಜಲಾಶಯ ತುಂಬಿದ ಬಳಿಕ ನೀರು ನೇರವಾಗಿ ರಾಮಸಾಗರ ಕೆರೆಗೆ ಹರಿದುಬರುತ್ತಿದ್ದು, ಕೆರೆ ತುಂಬಿ ಕೋಡಿ ಬಿದ್ದಿದೆ. ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಕೆರೆಯ ನೀರು ಆಂಧ್ರಪ್ರದೇಶದ ಶಾಂತಿಪುರಂ ಮಾರ್ಗವಾಗಿ ತಮಿಳುನಾಡಿನ ವಾಣಿಯಂಬಾಡಿಗೆ ಹೋಗುತ್ತಿದೆ.
ಸುಮಾರು 1,200 ಎಕರೆ ಜಮೀನಿಗೆ ನೀರುಣಿಸುವ ಸಾಮರ್ಥ್ಯದ ಕೆರೆಯು ನಾಲ್ಕು ವರ್ಷಗಳ ಹಿಂದೆ ತುಂಬಿತ್ತು. ಆ ನಂತರ ಕೆರೆ ತುಂಬಿರಲಿಲ್ಲ. ಇದೀಗ ಮತ್ತೆ ಕೆರೆ ತುಂಬಿ ಕೋಡಿ ಬಿದ್ದಿರುವುದು ಸುತ್ತಮುತ್ತಲಿನ ಗ್ರಾಮಗಳ ರೈತರ ಮೊಗದಲ್ಲಿ ಖುಷಿ ತಂದಿದೆ.
ರಾಮಸಾಗರ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮೊದಲು ಭತ್ತ ಬೆಳೆಯಲಾಗುತ್ತಿತ್ತು. ನಂತರ ಅಂತರ್ಜಲ ಅಭಿವೃದ್ಧಿಗಾಗಿ ಜಿಲ್ಲಾಡಳಿತವು ಕೆರೆ ತೂಬುಗಳನ್ನು ಮುಚ್ಚಿದ ಮೇಲೆ ರೈತರು ಭತ್ತದ ಪರ್ಯಾಯ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಚೆಕ್ ಡ್ಯಾಂ, ನೀರಾವರಿ ಅಥವಾ ಕೊಳವೆಬಾವಿಗಳ ಸೌಲಭ್ಯವುಳ್ಳವರು ಈಗಲೂ ಭತ್ತ ಬೆಳೆಯುತ್ತಾರೆ. ರಾಮಸಾಗರ, ಬೂಡಿದಿಮಿಟ್ಟ, ಸರ್ವರೆಡ್ಡಿಹಳ್ಳಿ, ಗೋಪೇನಹಳ್ಳಿ, ಅನ್ನಸಾಗರ, ತಾತಿರೆಡ್ಡಿಹಳ್ಳಿ, ಕದರೀಪುರ, ಪಾಪೇನಹಳ್ಳಿ, ತೊಂಗಲಕುಪ್ಪ ಸೇರಿದಂತೆ ಹಲವಾರು ಗ್ರಾಮಗಳ ರೈತರು ರಾಮಸಾಗರ ಕೆರೆಯ ನೀರಿನ ಉಪಯೋಗ ಪಡೆಯುತ್ತಿದ್ದಾರೆ.
ಬೇತಮಂಗಲ ಜಲಾಶಯ ಮತ್ತು ರಾಮಸಾಗರ ಕೆರೆಗಳ ನಡುವೆ ಕಡಿಮೆ ಅಂತರ ಇರುವುದರಿಂದ, ಕೋಡಿ ಹರಿಯುವುದನ್ನು ನೋಡಲು ಎರಡೂ ಕಡೆಗೆ ನೂರಾರು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಅರ್ಧ ಚಂದ್ರಾಕಾರದ ಕೋಡಿಯು ಸುಂದರವಾಗಿ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.