ಕೆಜಿಎಫ್: ಚಿನ್ನದ ಗಣಿ ಕಾರ್ಮಿಕರಿಗೆ ಸಿಲಿಕೋಸಿಸ್ (ಶ್ವಾಸಕೋಶದ ಕಾಯಿಲೆ) ಮತ್ತು ಹೃದಯ ತೊಂದರೆ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದರಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಪ್ರಾರಂಭಿಸಲು ಉಪಕರಣಗಳು ಮತ್ತು ಸಿಬ್ಬಂದಿ ನೇಮಕ ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್ ಕುಮಾರ್ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಕ್ಯಾಥ ಲ್ಯಾಬ್ ಮಾಡುವಂತೆ ಶಾಸಕಿ ಎಂ. ರೂಪಕಲಾ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ. ಅದನ್ನು ಖಾಸಗಿ ಸಹಭಾಗಿತ್ವದಡಿ ಸ್ಥಾಪಿಸಬಹುದಾಗಿದೆ. ಅದೇ ರೀತಿ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಿರುವ ಪ್ರಕರಣಗಳು ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ. ಇದರಿಂದ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸ್ಕ್ಯಾನ್ ಘಟಕದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಗಾಯಾಳುಗಳನ್ನು ಕೋಲಾರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು 150 ಹಾಸಿಗೆಗಳ ಆಸ್ಪತ್ರೆಯಾಗಿದೆ. ಪ್ರತಿನಿತ್ಯ 60 ರಿಂದ 70 ಒಳರೋಗಿಗಳು ದಾಖಲಾಗುತ್ತಾರೆ. 800 ರಿಂದ 1,000 ಹೊರ ರೋಗಿಗಳು ತಪಾಸಣೆಗೆ ಒಳಗಾಗುತ್ತಾರೆ.
ಅಲ್ಲದೇ, 50 ಹಾಸಿಗೆ ಹೊಂದಿದ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಅದು ಪ್ರಾರಂಭವಾಗುವ ಹಂತದಲ್ಲಿದೆ. ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು 3 ವೈದ್ಯರು, 12 ಶುಶ್ರೂಷಕರು ಮತ್ತು 15 ‘ಡಿ’ ಗ್ರೂಪ್ ನೌಕರರು ಬೇಕಾಗಿದ್ದಾರೆ. ಕೂಡಲೇ ಉಪಕರಣ ಮತ್ತು ಸಿಬ್ಬಂದಿಯನ್ನು ನಿಯೋಜಿಸ
ಬೇಕು ಎಂದು ಪತ್ರದ ಮೂಲಕ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.