ADVERTISEMENT

ಪೊಲೀಸರೇ ಆರೋಪಿಗಳು: ಡಿಎಆರ್‌ ಸಿಬ್ಬಂದಿ ಬಂಧನ

ಚಿಕ್ಕಕುಂತೂರು ದರೋಡೆ ಪ್ರಕರಣಕ್ಕೆ ರೋಚಕ ತಿರುವು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 14:50 IST
Last Updated 2 ಡಿಸೆಂಬರ್ 2021, 14:50 IST

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕಕುಂತೂರು ಬಳಿ ನಡೆದಿದ್ದ ದರೋಡೆ ಪ್ರಕರಣವು ರೋಚಕ ತಿರುವು ಪಡೆದಿದ್ದು, ಪ್ರಕರಣದಲ್ಲೇ ಪೊಲೀಸರೇ ಸಿಕ್ಕಿ ಬಿದ್ದಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಕಾನ್‌ಸ್ಟೆಬಲ್‌ಗಳಾದ ವೇಣುಗೋಪಾಲ್‌ ಮತ್ತು ಬಸವರಾಜು ಸೇರಿದಂತೆ 6 ಮಂದಿಯನ್ನು ನಗರದ ಗಲ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಧೀಶರೊಬ್ಬರಿಗೆ ಅಂಗರಕ್ಷಕರಾಗಿ ನಿಯೋಜನೆಗೊಂಡಿದ್ದ ವೇಣುಗೋಪಾಲ್‌ ಅವರು ಬಸವರಾಜು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರ ಉದಯ್‌, ಬೆಸ್ಕಾಂ ನೌಕರರಾದ ಮಾರ್ಕೋಂಡ ಮತ್ತು ಹರ್ಷದ್‌, ಅರಣ್ಯ ಇಲಾಖೆ ಗಾರ್ಡ್‌ ನವೀನ್‌ ಎಂಬುವರ ಜತೆ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿಯ ಶಬ್ಬೀರ್‌ ಬೇಗ್‌ ಎಂಬುವರನ್ನು ಚಿಕ್ಕಕುಂತೂರು ಗೇಟ್‌ ಬಳಿ ನ.27ರಂದು ಅಡ್ಡಗಟ್ಟಿ ದರೋಡೆ ಮಾಡಿದ್ದರು.

ADVERTISEMENT

ಬಂಗಾರಪೇಟೆಯಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ ಶಬ್ಬೀರ್ ಅವರು ಕಾರಿನಲ್ಲಿ ಕಟ್ಟಿಗೇನಹಳ್ಳಿಗೆ ವಾಪಸ್‌ ಹೋಗುತ್ತಿದ್ದಾಗ ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದರು. ಆರೋಪಿಗಳು ಪೊಲೀಸರ ಸೋಗಿನಲ್ಲಿ ಸಮವಸ್ತ್ರ ಧರಿಸಿ 2 ಕಾರುಗಳಲ್ಲಿ ಶಬ್ಬೀರ್‌ರ ವಾಹನವನ್ನು ಹಿಂಬಾಲಿಸಿ ಬಂದು ಕಟ್ಟಿಗೇನಹಳ್ಳಿ ಗೇಟ್‌ ಬಳಿ ಅಡ್ಡಗಟ್ಟಿದ್ದರು. ನಂತರ ತಾವು ಆಂಧ್ರಪ್ರದೇಶದ ಪೊಲೀಸರೆಂದು ಪರಿಚಯಿಸಿಕೊಂಡು, ಕಾರಿನಲ್ಲಿ ರಕ್ತಚಂದನ ಮರ ಸಾಗಿಸುತ್ತಿದ್ದೀಯಾ ಎಂದು ಬೆದರಿಸಿ ವಿಚಾರಣೆಗೆ ಕರೆದೊಯ್ಯುವ ನೆಪದಲ್ಲಿ ಶಬ್ಬೀರ್‌ರನ್ನು ಎಳೆದೊಯ್ದಿದ್ದರು.

ಶಬ್ಬೀರ್‌ರನ್ನು ರಾತ್ರಿಯಿಡೀ ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ಮತ್ತು ₹ 1,700 ಹಣ ದೋಚಿದ್ದರು.

ಪಿಸ್ತೂಲ್‌ನಿಂದ ಬೆದರಿಕೆ: ಪ್ರಕರಣದ ಪ್ರಮುಖ ಆರೋಪಿ ವೇಣುಗೋಪಾಲ್‌ ತಮ್ಮ ಸರ್ವಿಸ್‌ ಪಿಸ್ತೂಲ್‌ ತೋರಿಸಿ ಶಬ್ಬೀರ್‌ಗೆ ಬೆದರಿಕೆ ಹಾಕಿದ್ದರು. ಅಲ್ಲದೇ, ಶಬ್ಬೀರ್‌ರ ಸಹೋದರ ಶೇಖ್‌ಉಲ್ಲಾ ಅವರಿಗೆ ಕರೆ ಮಾಡಿ ತಮ್ಮ ಅಣ್ಣನನ್ನು ರಕ್ತಚಂದನ ಮರ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿಸಿರುವುದಾಗಿ ಹೇಳಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದರು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳು ಶಬ್ಬೀರ್‌ರನ್ನು ಕೋಲಾರ ಹೊರವಲಯದ ಟಮಕ ಬಳಿ ಕಾರಿನಿಂದ ಕೆಳಗೆ ತಳ್ಳಿ ವಾಹನಸಮೇತ ಪರಾರಿಯಾಗಿದ್ದರು. ಬಳಿಕ ಶಬ್ಬೀರ್‌ ಗಲ್‌ಪೇಟೆ ಠಾಣೆಗೆ ದೂರು ನೀಡಿದರು. ಅವರು ನೀಡಿದ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟ, ಹಲ್ಲೆ, ದರೋಡೆ, ಅಪರಾಧ ಸಂಚು ಆರೋಪ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.