ADVERTISEMENT

ಕೋಚಿಮುಲ್– ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಆಸ್ತಿಯಲ್ಲ: ಸಂಸದ ಎಸ್‌.ಮುನಿಸ್ವಾಮಿ

ಪತ್ರಿಕಾಗೋಷ್ಠಿಯಲ್ಲಿ ಸಂಸದ ಮುನಿಸ್ವಾಮಿ ಗುಡುಗು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 13:20 IST
Last Updated 11 ಜುಲೈ 2020, 13:20 IST

ಕೋಲಾರ: ‘ಕೋಚಿಮುಲ್ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಅಪ್ಪಂದಿರ ಆಸ್ತಿಯಲ್ಲ. ಈ ಸಂಸ್ಥೆಗಳ ಅಧ್ಯಕ್ಷರು ಕಾನೂನು ಉಲ್ಲಂಘಿಸಿ ಮಾಡಿರುವ ಅಕ್ರಮ ಹೇಳಲು ಯಾರ ಅಪ್ಪಣೆಯೂ ಬೇಕಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಗುಡುಗಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಹಕಾರ ಸಚಿವ ಟಿ.ಸೋಮಶೇಖರ್ ಅವರು ಇತ್ತೀಚೆಗೆ ಜಿಲ್ಲೆಗೆ ಬಂದಿದ್ದಾಗ ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕ್‌ ನಿರ್ದೇಶಕರೇ ಅವರ ಅಧ್ಯಕ್ಷರ ವಿರುದ್ಧ ದೂರು ನೀಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದು ಕುಟುಕಿದರು.

‘ಕಾನೂನಿನ ರೀತಿ ಕೆಲಸ ಮಾಡಬೇಕು. ಜಾತಿ, ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡುವುದು ಸರಿಯಲ್ಲ. ಜಿಲ್ಲೆಯ ಪ್ರತಿ ಮಹಿಳೆಯ ಖಾತೆಗೆ ಸಾಲ ವಿತರಣೆ ಆಗಬೇಕು. ಅದು ಬಿಟ್ಟು ಬೇಕಾದವರಿಗೆ ಸಾಲ ಕೊಡುವುದಲ್ಲ. ಇದು ಸರ್ಕಾರದ ಹಣ, ಅಧ್ಯಕ್ಷರ ಅಪ್ಪಂದಿರ ಹಣವಲ್ಲ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ’ ಎಂದು ಹೇಳಿದರು.

ADVERTISEMENT

‘ದೇಶದ ಜನರ ಹಿತ ಹಾಗೂ ಆರೋಗ್ಯ ಕಾಪಾಡುವ ಸರ್ಕಾರಗಳ ಪರ ನಿಲ್ಲಬೇಕಾದ ವಿಪಕ್ಷ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಜನ ಹಿತಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ವಿಪಕ್ಷ ನಾಯಕರು ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು ಜನರ ಆರೋಗ್ಯ ಕಾಪಾಡಿದರೆ ೨೦೨೧ರ ವೇಳೆಗೆ ಭಾರತ ಸಧೃಡ ರಾಷ್ಟ್ರವಾಗುತ್ತದೆ’ ಎಂದರು.

ಹತ್ಯೆ ಖಂಡನೀಯ: ‘ಬಂಗಾರಪೇಟೆ ತಹಶೀಲ್ದಾರ್‌ ಚಂದ್ರಮೌಳೇಶ್ವರ ಅವರ ಹತ್ಯೆ ಖಂಡನೀಯ. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಪೊಲೀಸರ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದು ವಿವರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ವೇಣುಗೋಪಾಲ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.