
ಮಾಲೂರು: ಕನ್ನಡ ಸಾಹಿತ್ಯ ಪರಿಷತ್ ಲಕ್ಕೂರು ಘಟಕದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಹುಮುಖಿ ಚಿಂತಕ ಪದ್ಮಾಲಯ ನಾಗರಾಜ್ ಮತ್ತು ಕವಿ, ಕಾದಂಬರಿಕಾರ ಗಂಗಪ್ಪ ತಳವಾರ್ ಅವರನ್ನು ಅಭಿನಂದಿಸಲಾಯಿತು.
ವಿಮರ್ಶಕ ಡಾ.ಚಂದ್ರಶೇಖರ್ ನಂಗಲಿ ಮಾತನಾಡಿ, ಪ್ರಶಸ್ತಿ ಪುರಸ್ಕೃತರಾದ ಪದ್ಮಾಲಯ ನಾಗರಾಜ್ ದೇಸಿ ಚಿಂತಕ. ಬಹುಮುಖಿ ಜ್ಞಾನ ಶಿಸ್ತುಗಳನ್ನು ಮೈಗೂಡಿಸಿಕೊಂಡವರು. ಅಚಲ ಸಂತ ಗುರುಪರಂಪರೆ ಬಗ್ಗೆ ಮಹತ್ವದ ಸಾಧನೆ ಮಾಡಿದವರು. ಪಾರಂಪರಿಕ ನಾಟಿ ವೈದ್ಯ, ಶಿಲ್ಪಿ, ವಾಸ್ತುಶಿಲ್ಪ, ಬರಹಗಾರ, ಹರಿಕಥೆ, ವಿಜ್ಞಾನಿ, ತಂಬೂರಿ ತತ್ವಪದ ರಚನೆಕಾರ, ಹೀಗೆ ಹೆಸರಿಸುತ್ತಾ ಹೋಗಬಹುದು ಎಂದರು.
ದೇಸಿ ಜ್ಞಾನ ಶಿಸ್ತು ಬಗ್ಗೆ ಇಷ್ಟು ಅನುಭವ ಇರುವ ನಾಗರಾಜ್ ಬಗ್ಗೆ ಕೆಲವು ಜನರಿಗೆ ಪರಿಚಯವೇ ಇಲ್ಲದಾಗಿದೆ ಅನ್ನೋದೇ ನೋವಿನ ವಿಚಾರ. ಅವರು ಈಗ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ಮತ್ತಷ್ಟು ಕೃತಿಗಳನ್ನು ಬರೆಯಿಲಿ ಎಂದು ಅಭಿಪ್ರಾಯಪಟ್ಟರು.
ಕವಿ, ಕಾದಂಬರಿಕಾರ ಗಂಗಪ್ಪ ತಳವಾರ್ ಅವರ ಗಂಗಪ್ಪ ಅವರ ‘ಧಾವತಿ’ ಕಾದಂಬರಿಯನ್ನು ಜ್ಞಾನಪೀಠ ವಿಜೇತ ಡಾ.ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಗೆ ಹೋಲಿಸಿದರು. ಸಂಸ್ಕಾರ ಕಾದಂಬರಿ ಅತಿ ಚರ್ಚಿತ ಕೃತಿ ನನ್ನನ್ನು ಆಕರ್ಷಣೆ ಮಾಡಿಲ್ಲ. ನನ್ನ ದೃಷ್ಟಿಯಲ್ಲಿ ನಿರಾಶಾದಾಯಕ ಇದೊಂದು ಭ್ರಮಾಲೋಕ ಕೃತಿ. ಆದರೆ, ಗಂಗಪ್ಪ ಬಹಳ ಧಾರುಣವಾದ ದಲಿತ ಜೀವನದ ಹಿನ್ನಲೆಯಲ್ಲಿ ವಾಸ್ತವ ನೆಲೆಗಟ್ಟಿನಿಂದ ತುಂಬಾ ಆಪ್ತವಾಗಿ ‘ಧಾವತಿ’ ಕಾದಂಬರಿಯನ್ನು ಚಿತ್ರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಲೂರು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ ಮಾತಾಡಿ, ಇಬ್ಬರು ಸನ್ಮಾನಿತರು ಜಿಲ್ಲೆ ಮತ್ತು ನಾಡಿಗೆ ಗೌರವ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅಧ್ಯಾಪಕಾರದ ಬರಗೂರು ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಡಾ.ನಾ.ಮುನಿರಾಜು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನೆ ಸಲ್ಲಿಸಿದರು. ಕೊಡಹಳ್ಳಿ ಸತೀಶ್ ನಿರೂಪಿಸಿದರು.
ಪ್ರಾಂಶುಪಾಲ ಶಂಕರಪ್ಪ ಮತ್ತು ಉಪ ಪ್ರಾಂಶುಪಾಲ ಅಲಿ ಉನ್ನಿಸಾ, ಕೊಡಹಳ್ಳಿ ಸತೀಶ್, ಪ್ರಾಧ್ಯಾಪಕ
 ವಿಶ್ವೇಶ್ವರಯ್ಯ, ಕೃಷ್ಣಾರೆಡ್ಡಿ, ಆರ್.ವೆಂಕಟೇಶ್. ಕವಿ ಮಾ.ಚಿ.ನಾಗರಾಜ್, ಸಾಹಿತಿ ರೋನೂರ ವೆಂಕಟೇಶ್, ಶಂಕರ್, ಆಂಜನೇಯಲು, ಮುನೇಂದ್ರ, ಲೈಬ್ರರಿ ನಾರಾಯಣಸ್ವಾಮಿ, ವೆಂಕಟೇಶ್ ಸೇರಿದಂತೆ ಭೋಧಕ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.