ADVERTISEMENT

ಮುಳಬಾಗಿಲು: ಬಾವಲಿಗಳ ಬೆಡಗಿನ ಲೋಕ

ತಾತಿಕಲ್ಲು ಸುತ್ತಮುತ್ತ ಮರಳು ಗಣಿಗಾರಿಕೆ ಹಾವಳಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 5:23 IST
Last Updated 14 ಡಿಸೆಂಬರ್ 2021, 5:23 IST
ಮುಳಬಾಗಿಲು ನಗರದ ಬಾಲಕೃಷ್ಣಾಶ್ರಮದ ಮರವೊಂದರಲ್ಲಿ ಆಶ್ರಯ ಪಡೆದಿರುವ ಬಾವಲಿಗಳು
ಮುಳಬಾಗಿಲು ನಗರದ ಬಾಲಕೃಷ್ಣಾಶ್ರಮದ ಮರವೊಂದರಲ್ಲಿ ಆಶ್ರಯ ಪಡೆದಿರುವ ಬಾವಲಿಗಳು   

ಮುಳಬಾಗಿಲು: ತಾಲ್ಲೂಕಿನ ಕಸಬಾ ಹೋಬಳಿಯ ತಾತಿಕಲ್ಲು, ದುಗ್ಗಸಂದ್ರ ಹೋಬಳಿಯ ಹನುಮನಹಳ್ಳಿ ಮತ್ತು ನಗರದ ಬಾಲಕೃಷ್ಣ ಆಶ್ರಮದ ಆವರಣ ಬಾವಲಿಗಳ ಆವಾಸ ತಾಣವಾಗಿದೆ.

ತಾತಿಕಲ್ಲು ಗ್ರಾಮ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿದೆ. ಇಲ್ಲಿ ಐನೂರು ವರ್ಷಗಳಿಗೂ ಹಳೆಯದಾದ ದೊಡ್ಡ ಆಲದ ಮರವಿದ್ದು, ಮೂರು ಸಾವಿರಕ್ಕೂ ಹೆಚ್ಚು ಬಾವಲಿಗಳಿಗೆ ಆಶ್ರಯ ನೀಡಿದೆ. ಸ್ಥಳೀಯವಾಗಿ ಇವುಗಳಿಗೆ ‘ಸೀಕರೆವುಲು’ ಎಂದು ಕರೆಯುತ್ತಾರೆ.

ಬಾವಲಿಗಳು ದಾರಿಹೋಕರ ಗಮನ ಸೆಳೆಯುತ್ತವೆ. ಮರದ ಬಳಿ ಯಾರಾದರೂ ಜೋರಾಗಿ ಶಬ್ದ ಮಾಡಿದರೆ ಹಿಂಡು ಹಿಂಡಾಗಿ ಊರೆಲ್ಲಾ ಸುತ್ತಾಡುತ್ತವೆ. ಈ ಹಿಂದೆ ಬ್ರಿಟಿಷ್ ಅಧಿಕಾರಿಗಳು ತಾತಿಕಲ್ಲು ಗ್ರಾಮಕ್ಕೆ ಭೇಟಿ ನೀಡಿದಾಗ ಈ ಮರದ ಬಳಿ ಶಬ್ದ ಮಾಡಿ ಇವುಗಳನ್ನು ರೇಗಿಸುತ್ತಿದ್ದರಂತೆ. ಆಗ ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ಅವುಗಳನ್ನು ವೀಕ್ಷಿಸುವುದು ಅವರ ಹವ್ಯಾಸವಾಗಿತ್ತು ಎಂದು ಗ್ರಾಮದ ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.

ADVERTISEMENT

ಸ್ವಾತಂತ್ರ್ಯಾ ನಂತರ ಈ ಮರ ತಮಗೆ ಸೇರಿದ್ದೆಂದು ಖಾಸಗಿ ವ್ಯಕ್ತಿಯೊಬ್ಬರು ತಕರಾರು ಮಂಡಿಸಿದ್ದರಂತೆ. ಮರವು ಖಾಸಗಿ ವ್ಯಕ್ತಿಗಳ ಅಧೀನದಲ್ಲಿದ್ದರೆ ಅದನ್ನು ಕಡಿದು ಹಾಕುತ್ತಾರೆ. ಆಗ ಮರದಲ್ಲಿ ಆಶ್ರಯ ಪಡೆದಿರುವ ಬಾವಲಿಗಳ ಆವಾಸಕ್ಕೆ ತೊಂದರೆಯಾಗಬಹುದೆಂದು ಯೋಚಿಸಿದ ಅಂದಿನ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಈ ಮರದ ಸ್ಥಳವನ್ನು ಸರ್ಕಾರಿ ಖರಾಬ್ ಆಗಿ ಪರಿವರ್ತಿಸಿದರು. ಅಂದಿನಿಂದ ಈ ಮರವು ಬಾವಲಿ ಸೇರಿದಂತೆ ಸಾವಿರಾರು ಜೀವಿಗಳಿಗೆ ಆಶ್ರಯ
ತಾಣವಾಗಿದೆ.

ಇತ್ತೀಚೆಗೆ ಬೇಟೆಗಾರರ ಕಣ್ಣು ಈ ಮರದ ಮೇಲೆ ನೆಟ್ಟಿದೆ. ರಾತ್ರಿ ಹಾಗೂ ಕೆಲವೊಮ್ಮೆ ಬೆಳಿಗ್ಗಿನ ವೇಳೆಯೂ ಕೆಲವರು ಮಾಂಸಕ್ಕಾಗಿ ಬಾವಲಿಗಳನ್ನು ಕೊಲ್ಲುತ್ತಿದ್ದಾರೆಎಂದು ಗ್ರಾಮಸ್ಥರು ಹೇಳುತ್ತಾರೆ. ‘ತಾತಿಕಲ್ಲು ಗ್ರಾಮದ ಸುತ್ತಮುತ್ತ ಅವ್ಯಾಹತವಾಗಿ ಮರಳು ಸಾಗಾಣಿಕೆ ನಡೆಯುತ್ತಿದೆ. ಗಣಿಗಾರಿಕೆಯು ಬಾವಲಿ ಸಂಕುಲಕ್ಕೆ ಕಂಟಕವಾಗಿದೆ’ ಎಂದು ರೈತ ಮುಖಂಡ ಯಲವಹಳ್ಳಿ ಪ್ರಭಾಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.