
ಮಾಲೂರು: ಸಪ್ಲಾಂಬದೇವಿ ಮತ್ತು ಭೀಮಲಿಂಗೇಶ್ವರ ರಾಸುಗಳ ಜಾತ್ರಾ ಮಹೋತ್ಸವ ಜೂನ್ 1ರಿಂದ 10ರವರೆಗೆ ನಡೆಸಲು ತಾಲ್ಲೂಕು ಆಡಳಿತ, ತೊರ್ನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಮುಖಂಡರ ಮೂಲಕ ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಜಾತ್ರಾ ಮಹೋತ್ಸವಕ್ಕೆ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ರೈತರು ಹಾಗೂ ರಾಸುಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಎಲ್ಲ ಇಲಾಖೆ ಅಧಿಕಾರಿಗಳು ಕಲ್ಪಿಸಬೇಕೆಂದು ಸೂಚಿಸಿದರು. ಪೊಲೀಸ್ ಇಲಾಖೆ ಜಾತ್ರಾ ಸಮಯದಲ್ಲಿ ಸ್ಥಳದಲ್ಲೇ ಮಕ್ಕಾಂ ಹೂಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಹೇಳಿದರು.
ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಎಪಿಎಂಸಿ ವತಿಯಿಂದ ಪ್ರಥಮ ಬಹುಮಾನ ₹10 ಸಾವಿರ, ದ್ವಿತೀಯ ಬಹುಮಾನ ₹7.500, ತೃತೀಯ ಬಹುಮಾನ ₹5 ಸಾವಿರ ನೀಡಲಾಗುವುದು. ಅಲ್ಲದೆ, ಪ್ರಗತಿಪರ ರೈತ ಕ್ಷೇತ್ರನಹಳ್ಳಿ ವೆಂಕಟೇಶ್ ಅವರು ವೈಯಕ್ತಿಕವಾಗಿ ಉತ್ತಮ ರಾಸುಗಳಿಗೆ ಪ್ರಥಮ ಬಹುಮಾನ 5 ಗ್ರಾಂ ಚಿನ್ನ, ದ್ವಿತೀಯ ಬಹುಮಾನ 2.50 ಗ್ರಾಂ ಚಿನ್ನ ಮತ್ತು ತೃತೀಯ ಬಹುಮಾನ 250 ಗ್ರಾಂ ಬೆಳ್ಳಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ನೀಡುತ್ತಾರೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ಭಾಗವಹಿಸುವ 50 ಜೋಡಿ ರಾಸುಗಳಿಗೆ ತಲಾ ₹ 2.500 ನಗದು ಬಹುಮಾನವನ್ನು ಶಾಸಕರು ನೀಡುವುದಾಗಿ ಘೋಷಣೆ ಮಾಡಿದರು.
ತಹಶೀಲ್ದಾರ್ ಎಂ.ವಿ.ರೂಪಾ, ಇ.ಒ ಕೃಷ್ಣಪ್ಪ, ನಗರ ಪಂಚಾಯಿತಿ ಅಧ್ಯಕ್ಷ ವಿಜಯನಾರಸಿಂಹ, ಕೋಮಲ್ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.