
ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜನ್ಮಭೂಮಿ ವೇದಿಕೆ ವತಿಯಿಂದ ಏರ್ಪಡಿಸಿರುವ ನಾಲ್ಕು ದಿನಗಳ ಶ್ರೀನಿವಾಸಪುರ ಹಬ್ಬಕ್ಕೆ ಗುರುವಾರ ರಾತ್ರಿ ತೆಲುಗು ಚಲನಚಿತ್ರ ಕಲಾವಿದ ಶಿವಾರೆಡ್ಡಿ ತಂಡದ ಹಾಸ್ಯ ಕಾರ್ಯಕ್ರದೊಂದಿಗೆ ಚಾಲನೆ ನೀಡಲಾಯಿತು.
ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಬೃಹತ್ ಪೆಂಡಾಲ್ ಕೆಳಗಿನ ವಿಶಾಲವಾದ ವೇದಿಕೆಯ ಮೇಲೆ ನೆರೆಯ ಆಂಧ್ರಪ್ರದೇಶದಿಂದ ಬಂದಿದ್ದ ಚಲನಚಿತ್ರ ಕಲಾವಿದರು ತಮ್ಮ ಹಾಸ್ಯ ಚಟಾಕಿಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು. ಹಾಡು, ನೃತ್ಯದ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ರಂಜಿಸಿದರು.
ಆರಂಭದಲ್ಲಿ ವಿಧಾನ ಸಭೆಯ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕಾಲಾವಿದರನ್ನು ಸ್ವಾಗತಿಸಿದರು. ಅನಂತರ ಪ್ರೇಕ್ಷರ ನಡುವೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಪ್ರೇಕ್ಷಕರಿಗಾಗಿ ಹಾಕಲಾಗಿದ್ದ 10 ಸಾವಿರ ಆಸನಗಳು ತುಂಬಿದ್ದು ವಿಶೇಷವಾಗಿತ್ತು. ರಾತ್ರಿ 11 ಗಂಟೆಯಾದರೂ ಪ್ರೇಕ್ಷಕರು ಏಳದೆ ಕಾರ್ಯಕ್ರಮ ವೀಕ್ಷಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಚಲನಚಿತ್ರ ನಟ ಶಿವಾರೆಡ್ಡಿ ಹಾಗೂ ತಂಡದ ಕಾವಿದರನ್ನು ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಸನ್ಮಾನಿಸಿದರು. ಪ್ರೇಕ್ಷಕರು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞತೆ ಅರ್ಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರೋಣೂರು ಚಂದ್ರಶೇಖರ್, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ರಾಯಲ್ಪಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ಮುಖಂಡರಾದ ಕೆ.ಕೆ.ಮಂಜು, ಎನ್.ರಾಜೇಂದ್ರ ಪ್ರಸಾದ್, ತಹಶೀಲ್ದಾರ್ ವೈ.ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.