ಕೋಲಾರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ 56 ಮಂದಿ ಪ್ರಗತಿಪರ ರೇಷ್ಮೆ ಬೆಳೆಗಾರರು ತಾಲ್ಲೂಕಿನ ಅಂಕತಟ್ಟಿ ಸೇರಿದಂತೆ ವಿವಿಧೆಡೆ ಬುಧವಾರ ರೇಷ್ಮೆ ಕೃಷಿಯ ಅಧ್ಯಯನ ನಡೆಸಿದರು.
ರೇಷ್ಮೆ ಇಲಾಖೆ ಕಚೇರಿಗೆ ಆಗಮಿಸಿದ ರೈತರಿಗೆ ಜಿಲ್ಲೆಯ ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ರೇಷ್ಮೆ ಕೃಷಿಯ ಸಾಧನೆ, ಪ್ರಗತಿಪರ ರೈತರು ಅಳವಡಿಸಿಕೊಂಡಿರುವ ತಾಂತ್ರಿಕತೆ, ಮರ ಪದ್ದತಿಯಲ್ಲಿ ಹಿಪ್ಪುನೇರಳೆ ಬೆಳೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ರೈತರ ತಂಡವು ಅಂಕತಟ್ಟಿ ಗ್ರಾಮದಲ್ಲಿ 24 ಎಕರೆ ಪ್ರದೇಶದಲ್ಲಿ ವಿ1 ತಳಿಯ ಹಿಪ್ಪುನೇರಳೆ ನಾಟಿ ಮಾಡಿರುವ ನಂಜುಂಡೇಶ್ವರ ಮತ್ತು ಸಿ.ಎಂ.ರಾಮಯ್ಯ ಅವರ ಜಮೀನಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಜತೆಗೆ ಪಾರ್ಶ್ವಗಾನಹಳ್ಳಿಯಲ್ಲಿ ಮರ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆದಿರುವ ನಾರಾಯಣಪ್ಪ ಅವರ ಜಮೀನಿಗೆ ತೆರಳಿ ಬೆಳೆ ವೀಕ್ಷಿಸಿದರು.
ನೀರಿನ ಸಮಸ್ಯೆ ನಡುವೆಯೂ ಜಿಲ್ಲೆಯ ರೈತರು ಅಲ್ಪ ಪ್ರಮಾಣದ ನೀರಿನಲ್ಲೇ ರೇಷ್ಮೆ ಬೆಳೆಯಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಕಂಡ ರೈತರು ಗೂಡಿನ ಗುಣಮಟ್ಟ, ತೋಟ ನಿರ್ವಹಣೆ, ನಾಟಿ ಪದ್ಧತಿ, ಮಣ್ಣು ಪರೀಕ್ಷೆಯ ಅವಶ್ಯಕತೆ ಬಗ್ಗೆ ಮಾಹಿತಿ ಪಡೆದರು.
ಆನೇಕಲ್ ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಾರೆಡ್ಡಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಜಯಶಂಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.