ADVERTISEMENT

ಸಿದ್ದರಾಮಯ್ಯಗೆ ಟೋಪಿ ಹಾಕುತ್ತಿದ್ದಾರೆ: ವರ್ತೂರು ಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 12:55 IST
Last Updated 21 ಜುಲೈ 2022, 12:55 IST
   

ಕೋಲಾರ: ‘ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕರೆದು, ಸಿದ್ದರಾಮಯ್ಯ ಅವರಿಗೆ ಕೆಲವರು ಟೋಪಿ ಹಾಕುತ್ತಿದ್ದಾರೆ. ಕ್ಷೇತ್ರದ ಯಾವ ಊರಲ್ಲೂ ಕಾಂಗ್ರೆಸ್‌ ಇಲ್ಲ. ಈ ಗುಟ್ಟನ್ನು ಹೇಳಬಾರದಿತ್ತು. ಸಿದ್ದರಾಮಯ್ಯ ನಮ್ಮವರೆಂಬ ಕಾರಣಕ್ಕೆ ಹೇಳುತ್ತಿದ್ದೇನೆ’ ಎಂದು ಬಿಜೆಪಿ ಮುಖಂಡ, ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವರ್ತೂರು ಪ್ರಕಾಶ್‌ ಹೇಳಿದರು.

ಗುರುವಾರ ಇಲ್ಲಿ ಆಯೋಜಿಸಿದ್ದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕುರುಬ ಸಮಾಜಕ್ಕೆ ಅವಮಾನವಾಗಬಾರದೆಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳುತ್ತಿದ್ದೇನೆ. ಸೋಲಿಸಲೆಂದೇ, ಹಾಳು ಮಾಡಲೆಂದು ಅವರನ್ನು ಇಲ್ಲಿಗೆ ಕರೆ ತರಲು ಸಂಚು ಹಾಕುತ್ತಿದ್ದಾರೆ. ಮುಸ್ಲಿಂ ಹೊರತುಪಡಿಸಿ ಕ್ಷೇತ್ರದ 220 ಹಳ್ಳಿಯಲ್ಲಿ ಪ್ರತಿ ಮತದಾರ ನನಗೆ ಗೊತ್ತು’ ಎಂದರು.

‘ಹೀಗಿದ್ದೂ ಸ್ಪರ್ಧೆ ಮಾಡಲು ಇಲ್ಲಿಗೆ ಬಂದರೆ ಎದುರಿಸಲು ನಾನು ಸಿದ್ಧ. ಮಿಸ್ಟರ್‌ ರಮೇಶ್‌ ಕುಮಾರ್‌, ನೀವು ಕೋಲಾರ ಕ್ಷೇತ್ರದಲ್ಲಿ ಐದು ಸಾವಿರ ಜನರನ್ನು ಸೇರಿಸಿದರೆ ನಾನು ಸನ್ಯಾನಿ ಆಗಿಬಿಡುತ್ತೇನೆ. ಕೋಲಾರಮ್ಮ ದೇಗುಲದಲ್ಲಿ ಸೇವೆ ಮಾಡಿಕೊಂಡಿರುತ್ತೇನೆ’ ಎಂದು ಸವಾಲು ಹಾಕಿದರು.

ADVERTISEMENT

‘ನನ್ನನ್ನು ಲೂಟಿ ಮಾಡಿ, ಕೋಟಿಗಟ್ಟಲೆ ಹಣ ಮಾಡಿಕೊಂಡ ಕೆಲವರು ದೂರವಾಗಿದ್ದಾರೆ. ಮಾರುತಿ ಕಾರಿನಲ್ಲಿ ತಿರುಗುತ್ತಿದ್ದವರು ಈಗ ಇನೋವಾ ಕಾರಿನಲ್ಲಿ ತಿರುಗಾಡುತ್ತಿದ್ದಾರೆ. ಜೆಸಿಬಿ, ಟಿಪ್ಪರ್‌ ಮಾಡಿಕೊಟ್ಟೆ. ಆದರೂ ಬಿಟ್ಟು ಹೋದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.