ಕೋಲಾರ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಸಂಘಟಿತ ಕಾರ್ಮಿಕರು ಕೋವಿಡ್ ಹಾಗೂ ಲಾಕ್ಡೌನ್ನಿಂದ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರ ಅಸಂಘಟಿತ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಹಣಕಾಸು ನೆರವು ಘೋಷಿಸಿರುವ ಸಾಯುವ ಸ್ಥಿತಿಯಲ್ಲಿರುವವರಿಗೆ ಆಮ್ಲಜನಕ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ, ಕ್ಷೌರಿಕರಿಗೆ, ಧೋಬಿಗಳಿಗೆ, ಕಟ್ಟಡ ಕಾರ್ಮಿಕರಿಗೆ ಸಮಾನವಾಗಿ ತಿಂಗಳಿಗೆ ₹ 5 ಸಾವಿರ ಹಣಕಾಸು ನೆರವು ಘೋಷಿಸಲಾಗಿತ್ತು. ಆದರೆ, ಕಾರ್ಮಿಕರಿಗೆ ಪರಿಹಾರ ನೀಡಿರಲಿಲ್ಲ. ಇದೀಗ ಕೋವಿಡ್ 2ನೇ ಅಲೆ ಸುನಾಮಿ ರೀತಿ ಅಪ್ಪಳಿಸುತ್ತಿದ್ದು, ಸೋಂಕು ಶ್ರಮಿಕ ವರ್ಗಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಸಂಘಟಿತ ಕಾರ್ಮಿಕರಿಗೆ ಮೊದಲ ಲಾಕ್ಡೌನ್ ವೇಳೆ ನೀಡಿದ್ದ ಪರಿಹಾರ ಮೊತ್ತ ₹ 5 ಸಾವಿರವನ್ನು ಈ ಬಾರಿ ಕಡಿತಗೊಳಿಸಿ ₹ 3 ಸಾವಿರ ಕೊಡುವುದಾಗಿ ಸರ್ಕಾರ ಹೇಳಿದೆ. ಜತೆಗೆ ಟೈಲರ್ಗಳು, ಮೆಕ್ಯಾನಿಕ್ಗಳು, ಮನೆ ಕೆಲಸದವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಚಿಂದಿ ಆಯುವವರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತಲಾ ₹ 2 ಸಾವಿರ ಪರಿಹಾರ ಘೋಷಿಸಿರುವ ಕ್ರಮ ಸರಿಯಿದೆ ಎಂದು ಹೇಳಿದ್ದಾರೆ.
ಕೋವಿಡ್ ಹೆಮ್ಮಾರಿಯು ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಕೆಲಸದೊಂದಿಗೆ ಜೀವವನ್ನೇ ಕಸಿದುಕೊಳ್ಳುತ್ತಿದೆ. ಕೋವಿಡ್ನಿಂದ ಶ್ರಮಿಕ ವರ್ಗದವರ ಬದುಕು ಬರ್ಬರವಾಗಿದೆ. ಶ್ರಮಿಕ ವರ್ಗಕ್ಕೆ ₹ 10 ಸಾವಿರ ಆರ್ಥಿಕ ನೆರವು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.