
ನಾಯಿ ಕಡಿತದಿಂದ ಗಾಯಗೊಂಡವರು ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಕೋಲಾರ: ನಗರದಲ್ಲಿ ಬುಧವಾರ ಬೀದಿನಾಯಿಯೊಂದು ಒಂದೂವರೆ ತಾಸಿನಲ್ಲಿ ಆರ್ಟಿಒ ಬ್ರೇಕ್ ಇನ್ಸ್ಪೆಕ್ಟರ್ ಸೇರಿದಂತೆ 21 ಜನರನ್ನು ಕಚ್ಚಿ ಗಾಯಗೊಳಿಸಿದೆ.
ಸಾರ್ವಜನಿಕರೇ ಆ ನಾಯಿಯನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ. ಬಾಯಿಯಿಂದ ಜೊಲ್ಲು ಸೋರುತ್ತಿದ್ದ ಕಾರಣ ಅದು ಹುಚ್ಚುನಾಯಿ ಎಂದು ಗಾಯಾಳುಗಳು ಹೇಳಿದ್ದಾರೆ.
ಆರ್ಟಿಓ ಕಚೇರಿ ಮುಂಭಾಗ ಬೆಳಗ್ಗೆ 11 ಗಂಟೆಗೆ ಆರ್ಟಿಓ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿದ್ದವರನ್ನು ನಾಯಿ ಕಚ್ಚಿ ಗಾಯಗೊಳಿಸಿದೆ. ಅಲ್ಲಿಂದ ಪಕ್ಕದ ಬಡಾವಣೆ ಹಾಗೂ ಬಿಜಿಎಸ್ ಪಿಯು ಕಾಲೇಜು ಬಳಿ ಹೋಗಿ ಅಲ್ಲಿಯೂ ನಾಲ್ಕೈದು ಮಂದಿಯನ್ನು ಕಚ್ಚಿ ಗಾಯಗೊಳಿಸಿದೆ.
ನಾಯಿಯಿಂದ ಕಡಿತಕ್ಕೊಳಗಾದ ಗಾಯಾಳುಗಳನ್ನು ಕೂಡಲೇ ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಥಮ ಚಿಕಿತ್ಸೆ ಮಾಡಿಸಿ ಲಸಿಕೆ ನೀಡಿ ಕಳಿಸಲಾಯಿತು.
ಕೋಲಾರ ನಗರಸಭೆ ಆಯುಕ್ತ ನವೀನ್ ಚಂದ್ರ, ಕೆಜಿಎಫ್ನಿಂದ ನಾಯಿ ಹಿಡಿಯುವವರನ್ನು ಕರೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ನಾಯಿಯನ್ನು ಸಾರ್ವಜನಿಕರೇ ಚರಂಡಿಗೆ ತಳ್ಳಿ ಕೋಲಿನಿಂದ ಹೊಡೆದು ಕೊಂದು ಹಾಕಿದರು.
ಆರ್ಟಿಒ ಕಚೇರಿ ಆವರಣದಲ್ಲಿ ವಿವಿಧ ಕೆಲಸಕ್ಕೆಂದು ಬಂದವರು ಬೀದಿನಾಯಿ ದಾಳಿಗೆ ಬೆದರಿ ಕಂಗಾಲಾಗಿ ಓಡುತ್ತಿದ್ದ ದೃಶ್ಯ ಕಂಡುಬಂತು. ಕೆಲ ದೃಶ್ಯಗಳು ಕಚೇರಿಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.