ADVERTISEMENT

ಸಂವಿಧಾನ ರಕ್ಷಕರಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:20 IST
Last Updated 11 ಏಪ್ರಿಲ್ 2019, 13:20 IST

ಕೋಲಾರ: ‘ಸಂವಿಧಾನ ರಕ್ಷಣೆಗೆ ಬದ್ಧವಾಗಿರುವವರಿಗೆ ಸಂಘಟನೆಯು ಬೆಂಬಲ ನೀಡಲಿದ್ದು, ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಪರ ಪ್ರಚಾರ ಮಾಡಲು ನಿರ್ಧರಿಸಲಾಗಿದೆ’ ಎಂದು ಭೀಮಸೇನೆ -ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಚಾಲ್ತಿಯಲ್ಲಿದೆ. ಸಂವಿಧಾನ ರಕ್ಷಣೆಗೆ ಒತ್ತು ನೀಡುವವರನ್ನು ಬೆಂಬಲಿಸುತ್ತೇವೆ’ ಎಂದರು.

‘ಸಂವಿಧಾನದಿಂದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ರಾಜನಾಗಲು ಅವಕಾಶವಿದೆ. ದೇಶದ ಎಲ್ಲಾ ಸಮುದಾಯಗಳು ಸಮಾನತೆಯ ಬದುಕು ಸಾಗಿಸಲು ಸಾಧ್ಯವಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನಪರ ಯೋಜನೆಗಳನ್ನು ಬದಿಗೊತ್ತಿ ಕೋಮುವಾದ, ಜಾತೀಯತೆ, ಅಸ್ಪೃಶ್ಯತೆ, ಮೌಢ್ಯದ ಹಾದಿಯಲ್ಲಿ ಸಾಗುತ್ತಾ ದ್ವೇಷ ಬಿತ್ತುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಹಿಂದುಳಿದ ವರ್ಗದ ಮೋದಿಯವರಿಗೆ ಅಧಿಕಾರ ಕೊಟ್ಟಿರುವ ಬಿಜೆಪಿಯು ಅವರನ್ನು ಉತ್ತಮ ಭಾಷಣಕಾರನಾಗಿ ಬಳಸಿಕೊಂಡಿದೆ. ಗಾಂಧೀಜಿ ಕೊಂದ ಗೂಡ್ಸೆಗೆ ಜೈಕಾರ ಹಾಕುವವರು ಹೆಚ್ಚಾಗುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ರಕ್ಷಣೆ ಇಲ್ಲವಾಗಿದೆ. ಸಂವಿಧಾನಕ್ಕೂ ಧಕ್ಕೆ ತರುವ ಲಕ್ಷಣ ಗೋಚರಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವೆಂಕಟಸ್ವಾಮಿ, ರಾಜ್ಯ ಘಟಕದ ಖಜಾಂಚಿ ಕೆ.ಮುನಿರಾಜು, ರಾಜ್ಯ ಸಮಿತಿ ಸದಸ್ಯರಾದ ಗಾಯಿತ್ರಿ, ರಾಮಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.