ADVERTISEMENT

ಕೊರೊನಾ ಸಮಯದಲ್ಲಿ ಕೈಹಿಡಿದ ಸ್ವೀಟ್‌ ಕಾರ್ನ್‌

ಜಿ.ವಿ.ಪುರುಷೋತ್ತಮರಾವ್
Published 19 ಮೇ 2021, 13:59 IST
Last Updated 19 ಮೇ 2021, 13:59 IST
ಮುಳಬಾಗಿಲು ತಾಲ್ಲೂಕು ಕಸಬಾ ಹೋಬಳಿ ಪಿ.ಗಂಗಾಪುರ ಗ್ರಾಮದಲ್ಲಿ ರೈತ ಮುನಿರಾಮಯ್ಯ
ಮುಳಬಾಗಿಲು ತಾಲ್ಲೂಕು ಕಸಬಾ ಹೋಬಳಿ ಪಿ.ಗಂಗಾಪುರ ಗ್ರಾಮದಲ್ಲಿ ರೈತ ಮುನಿರಾಮಯ್ಯ   

ಮುಳಬಾಗಿಲು: ಕೊರೊನಾ ಸಂಕಷ್ಟ ಸಮಯದಲ್ಲಿ ತರಕಾರಿ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಗುಣಮಟ್ಟದ ಟೊಮೆಟೊ ಸಹ ರಸ್ತೆ ಬದಿಗೆ ಎಸೆಯಲಾಗುತ್ತಿದೆ. ಅಂತಹ ಸಮಯದಲ್ಲಿ ತಾಲ್ಲೂಕಿನ ಕಸಬಾ ಹೋಬಳಿ ಪಿ.ಗಂಗಾಪುರದ ರೈತರು ಸ್ವೀಟ್‌ ಕಾರ್ನ್‌ ಬೆಳೆದು ಉತ್ತಮ ಲಾಭ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ಪಿ.ಗಂಗಾಪುರ ಗ್ರಾಮದ ಮುನಿರಾಮಯ್ಯನವರು ಒಂದು ಎಕರೆ ಜಮೀನಿನಲ್ಲಿ ಸ್ವೀಟ್‌ ಕಾರ್ನ್‌ ಅನ್ನು ₹15 ಸಾವಿರ ಬಂಡವಾಳದೊಂದಿಗೆ ಬೆಳೆದಿದ್ದಾರೆ. ಉತ್ತಮ ಗುಣಮಟ್ಟದ ಬೀಜವನ್ನು ನೆರೆಯ ಆಂಧ್ರಪ್ರದೇಶದ ವಿ.ಕೋಟಿಯಲ್ಲಿ ಸ್ನೇಹಿತರ ನೆರವಿನಿಂದ ಪಡೆದಿದ್ದಾರೆ. ಮಾರುಕಟ್ಟೆ ಹೇಗೆ ಎಂಬ ಪ್ರಶ್ನೆ ಎದುರಾದಾಗ ಕೋಲಾರದಲ್ಲಿ ರಿಲೆಯನ್ಸ್‌ಗೆಸ್ವೀಟ್‌ ಕಾರ್ನ್‌ ಬೇಡಿಕೆ ಇರುವ ಬಗ್ಗೆ ತಿಳಿದಿದೆ. ಮೊದಲ ಬಾರಿಗೆ ಮೂರು ಸಾವಿರ ತೆನೆ, ಎರಡನೇ ಹಂತದಲ್ಲಿ ಮೂರೂವರೆ ಸಾವಿರ ತೆನೆಯನ್ನು ಮಾರಾಟ ಮಾಡಿದ್ದಾರೆ.

ತೆನೆಯೊಂದಕ್ಕೆ ₹4.50 ನೀಡಿದ್ದಾರೆ. ಮೊದಲನೇ ಕೊಯಿಲಿಗೆ ತಮ್ಮ ಬಂಡವಾಳಕ್ಕೆ ಡಬಲ್ ಅಂದರೆ ಸುಮಾರು ₹30 ಸಾವಿರ ಸಿಕ್ಕಿದೆ. ಇನ್ನು ಫಸಲು ಇದ್ದು ಮತ್ತೆ ₹30 ಸಾವಿರ ಸಿಗುವ ನಿರೀಕ್ಷೆ ಇದೆ.

ADVERTISEMENT

‘ಕೊರೊನಾ ಇಲ್ಲದಿದ್ದಲ್ಲಿ ಚೆನೈ ಮಾರುಕಟ್ಟೆಗೆ ಕಳುಹಿಸಿದ್ದಲ್ಲಿ ಇನ್ನು ಹೆಚ್ಚಿನ ಹಣ ಸಿಗುವುದಿತ್ತು’ ಎನ್ನುವ ಮುನಿರಾಮಯ್ಯನವರು, ಎರಡು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಅದನ್ನು ತೆಗೆದು ಮಾರುಕಟ್ಟೆಗೆ ಕಳುಹಿಸಲು ಇನ್ನೂ ನಾಲ್ಕು ವಾರಗಳು ಬೇಕಾಗಬಹುದು. ಆಗ ಟೊಮೆಟೊ ಬೆಳೆ ಒಂದು ಹಂತಕ್ಕೆ ಬರಬಹುದೆಂಬ ನಂಬಿಕೆ ಅವರದಾಗಿದೆ.

‘ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರು ಒಂದೇ ಬೆಳೆಗಳತ್ತ ವಾಲದೆ ವಾಣಿಜ್ಯ ಬೆಳೆಗಳತ್ತ ಗಮನಹರಿಸಿ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು ಎಂಬುದಕ್ಕೆ ತಾವು ಬೆಳೆದ ಸ್ವೀಟ್‌ ಕಾರ್ನ್‌ ಉತ್ತಮ ಉದಾಹರಣೆ. ರೈತರು ಸಂಕಷ್ಟದ ಸಮಯದಲ್ಲಿ ಧೃತಿಗೆಡದೇ ಆಶವಾದಿಗಳಾಗಿ ಬದುಕಬೇಕು’ ಎನ್ನುತ್ತಾರೆ ಮುನಿರಾಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.