ADVERTISEMENT

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಕ್ರಮಕೈಗೊಳ್ಳಿ: ಶಾಸಕ ಕೆ.ಶ್ರೀನಿವಾಸಗೌಡ ಸೂಚನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 15:04 IST
Last Updated 9 ಜನವರಿ 2020, 15:04 IST

ಕೋಲಾರ: ‘ಕಾಲೇಜಿನ ಪರಿಸ್ಥಿತಿ ಬದಲಾಯಿಸಿದರೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಸಹಾರಿಯಾಗುತ್ತದೆ, ಇದಕ್ಕೆ ವಿವಿಧ ವಿಭಾಗಗಳ ಮುಖ್ಯಸ್ಥರು ಕ್ರಮಕೈಗೊಳ್ಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸೂಚಿಸಿದರು.

ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಗುರುವಾರ ನಡೆದ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕಾಲೇಜಿನ ಸಂಪನ್ಮೂಲ ಹೆಚ್ಚಿಸಲು ಸಾಕಷ್ಟು ಅವಕಾಶಗಳಿದ್ದು, ಇದಕ್ಕೆ ಜನಪ್ರತಿನಿಧಿಗಳ ಅನುದಾನ ಮಂಜೂರು ಮಾಡಿಸಲಾಗುವುದು’ ಎಂದರು.

‘ಇಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ನೀಡಿದರೆ, ಸಿಎಸ್‌ಆರ್ ಅನುದಾನ, ತಮ್ಮ ಹಾಗೂ ಜಿ.ಪಂ ಅಧ್ಯಕ್ಷರ ಅನುದಾನ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಂದ ಅನುದಾನ ಬಿಡುಗಡೆಗೊಳಿಸಿ ಆದ್ಯತೆ ಮೇರೆಗೆ ಸಮಸ್ಯೆಗಳನ್ನು ನಿವಾರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಧುಲತಾ ಮೋಸಸ್ ಮಾತನಾಡಿ, ‘ಚುನಾವಣೆಗಳ ಸಂದರ್ಭದಲ್ಲಿ ಕಾಲೇಜಿನ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪೀಠೋಪಕರಣ, ಪ್ರೊಜೆಕ್ಟರ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕೊಠಡಿಗಳಿಂದ ತೆಗೆದುಹಾಕಿ ಹಾಳು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಲೋಕೋಪಯೋಗಿ ಇಲಾಖೆಯವರ ಕೆಲಸ ಮುಗಿದ ಬಳಿಕ ಇವುಗಳನ್ನು ಅಳವಡಿಸಿಕೊಡುವುದೂ ಇಲ್ಲ. ದೂರವಾಣಿ ಕರೆ ಮಾಡಿ, ಪತ್ರಗಳನ್ನು ಕಳುಹಿಸಿದರೂ ಸ್ಪಂದಿಸುವುದಿಲ್ಲ’ ಎಂದು ಸಭೆಯ ಗಮನಕ್ಕೆ ತಂದರು.

‘ಕಾಲೇಜಿ ವಿದ್ಯುತ್ ಬಿಲ್, ಪೋನ್ ಬಿಲ್‌ಗೆ ಅನುದಾನವು ವರ್ಷಕ್ಕೆ ಒಮ್ಮೆ ನೀಡಲಾಗುತ್ತಿದೆ. ಆದರೆ ಬೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿ ತೊಂದರೆ ನೀಡುತ್ತಾರೆ. ಪರೀಕ್ಷೆ ಸಮಯದಲೂ ತೊಂದರೆ ನೀಡಿದ್ದಾರೆ’ ಎಂದು ಹೇಳಿದರು.

‘ಅಭಿವೃದ್ಧಿ ಸಮಿತಿ ಅನುದಾನ ಬಳಸಿ ಬಿಲ್ ಪಾವತಿ ಮಾಡಲು ನಾವು ಸಿದ್ಧವಿದ್ದೇವೆ. ಆದರೆ ನಾವು ಹಾಗೆ ಮಾಡಿದರೆ ವಾರ್ಷಿಕ ಅನುದಾನ ಬರುವುದಿಲ್ಲ. ಹೀಗಾಗಿ ಸಮಿತಿ ಅನುದಾನದಲ್ಲಿ ಬಿಲ್ ಕಟ್ಟುವುದಕ್ಕೆ ಅವಕಾಶ ಮಾಡಿಕೊಡಬೇಕು. ಜತೆಗೆ ವಾರ್ಷಿಕ ಅನುದಾನವನ್ನು ಕೊಡಿಸಿದ ಬಳಿಕ ಮುಂಗಡವಾಗಿ ಬೆಸ್ಕಾಂಗೆ ಕಟ್ಟುವುದಕ್ಕೂ ಅವಕಾಶ ಮಾಡಿಕೊಟ್ಟರೆ ಸಮಸ್ಯೆ ಬರದಂತಾಗುತ್ತದೆ’ ಎಂದು ವಿವರಿಸಿದರು.

ಮನವಿಗೆ ಸ್ಪಂದಿಸಿದ ಶಾಸಕ ಕೆ.ಶ್ರೀನಿವಾಸಗೌಡ, ‘ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬದ್ರಿನಾಥ್‌ಗೆ ಕರೆ ಮಾಡಿ, ಸಭೆಗೆ ಆಗಮಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕಾಲೇಜಿನಲ್ಲಿ ಹಾಳು ಮಾಡಿರುವುದನ್ನು ಸರಿಪಡಿಸಿಕೊಡುವಂತೆ ತಾಕೀತು ಮಾಡಿದರು.

ವಿಧಾನಪರಿಷತ್ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ ಮಾತನಾಡಿ, ‘ಈ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೆನೆ’ ಎಂದು ತಿಳಿಸಿದರು.

‘ಕಾಲೇಜಿನಲ್ಲಿನ ಸಿಬ್ಬಂದಿ ಕೊರತೆ ನಿವಾರಿಸಬೇಕು, ಶೌಚಾಲಯ ನಿರ್ಮಾಣ ಮಾಡಬೇಕು, ಕಂಪ್ಯೂಟರ್ ಆಪರೇಟರ್‌ಗೆ ₨ ೮ ಸಾವಿರ ವೇತನ ನೀಡುತ್ತಿದ್ದು, ₹10 ಸಾವಿರಕ್ಕೆ ಏರಿಸಬೇಕು, ಇದೀಗ ಇಲಾಖೆಯಿಂದ ಕಂಪ್ಯೂಟರ್‌ಗಳು ಬಂದಿದ್ದು, ಅದಕ್ಕೆ ಬೇಕಾದ ೧೫ ಟೇಬಲ್, ೪೦ ಚೇರ್‌ಗಳು, ಯುಪಿಎಸ್ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಪ್ರಾಂಶುಪಾಲೆ ಮಧುಲತಾ ಮೋಸಸ್ ಕೋರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಜಿ.ಪಂ ಕಡೆಯಿಂದಲೂ ಸಾಧ್ಯವಾದಷ್ಟೂ ನೆರವು ಕಲ್ಪಿಸಲಾಗುವುದು’ ಎಂದು ಹೇಳಿದರು.

ರವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಇ.ಗೋಪಾಲಪ್ಪ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಮುರಳಿಧರ್, ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿ ಅನಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.